ಟಾಟಾ ಕಂಪೆನಿಯ ಗ್ರಹಗತಿ ನೆಟ್ಟಗಿಲ್ಲ
ನವದೆಹಲಿ, ಡಿ.4:ಭಾರತದ ಉಕ್ಕು ಉದ್ಯಮದ ಅಗ್ರಗಣ್ಯ ಕಂಪೆನಿ ಟಾಟಾ ಸ್ಟೀಲ್ ಗೆ ಆರ್ಥಿಕ ಬಿಕ್ಕಟ್ಟಿನ ತುಕ್ಕು ಹಿಡಿಯ ಹತ್ತಿದೆ. ರತನ್ ಟಾಟಾ ಅವರ ನಿದ್ರಾರಹಿತ ರಾತ್ರಿಗಳು ಹೆಚ್ಚಾಗುವ ಸಾಧ್ಯತೆಗಳಿವೆ. ನ್ಯಾನೋ ರಗಳೆ, ತಾಜ್ ಹೊಟೆಲ್ ಮೇಲೆ ದಾಳಿ ಹೀಗೆ ಒಂದೊಂದಾಗಿ ಪ್ರಹಾರಕ್ಕೆ ಸಿಕ್ಕಿ ಮಾನಸಿಕವಾಗಿ ಜರ್ಝರಿತರಾಗಿ ಹೋಗಿದ್ದಾರೆ.
ಜಗತ್ತಿನ ಅತಿದೊಡ್ಡ ಉಕ್ಕು ಉತ್ಪಾದನಾ ಕಂಪೆನಿಯಾದ ಆರ್ಸೆಲರ್ ಮಿತ್ತಲ್ ಭಾರಿ ನಷ್ಟದ ನಂತರ ಸಿಬ್ಬಂದಿ ಕಡಿತ, ಉತ್ಪಾದನಾ ಹಿಡಿತಕ್ಕೆ ಮುಂದಾದರೂ, ಭಾರತದ ಟಾಟಾ ಕಂಪೆನಿ ಸ್ಥಿರತೆ ಕಾಯ್ದುಕೊಂಡಿದ್ದೇವೆಂದು ಹೇಳುತ್ತಾ ಬಂದಿದ್ದರು. ಆದರೆ ಈಗ ಕಾಲ ಸನ್ನಿಹಿತವಾಗಿದೆ. ಒಂದು ಅಂದಾಜಿನ ಪ್ರಕಾರ ಮಾರ್ಚ್ 2009 ರ ವೇಳೆಗೆ ಯುಕೆ ಕೋರಸ್ ಸಮೂಹ ಘಟಕದಿಂದ ಸುಮಾರು 525 ಮಿಲಿಯನ್ ಡಾಲರ್ ಹಾಗೂ ಭಾರತದ ಘಟಕದಿಂದ 60 ಮಿಲಿಯನ್ ಡಾಲರ್ ಉಳಿತಾಯ ಮಾಡುವ ಯೋಜನೆಯಲ್ಲಿದೆ.
ಹೀಗಾಗಿ ಉತ್ಪಾದನಾ ಕ್ಷಮತೆ ಶೇ. 30 ರಷ್ಟು ತಗ್ಗಲಿದ್ದು, ಸುಮಾರು 400 ಜನಕ್ಕೆ ಗೋಲ್ಡನ್ ಹ್ಯಾಂಡ್ ಶೇಕ್ ಗೌರವ ಸಿಗಲಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಉಕ್ಕು ಉದ್ಯಮಕ್ಕೆ ಬೇಡಿಕೆ ಕಮ್ಮಿಯಾಗಿದೆ. ಆರ್ಥಿಕ ಕುಸಿತದ ಈ ಪ್ರವಾಹವನ್ನು ಎದುರಿಸುವುದು ಅನಿವಾರ್ಯ ಎನ್ನುತ್ತಾರೆ ಟಾಟಾ ಅಂಗ ಸಂಸ್ಥೆ ಕೋರಸ್ ನ ವ್ಯವಸ್ಥಾಪಕ ನಿರ್ದೇಶಕ ಬಿ ಮುತ್ತುರಾಮನ್.
(ಏಜೆನ್ಸೀಸ್)
ಇದನ್ನೂ ಓದಿ:
ಭಾರತದ ಪ್ರಧಾನಿಯಾಗಿ ರತನ್ ಟಾಟಾ
ಗುಜರಾತ್ ಗೂಡಿಗೆ ನ್ಯಾನೋ ನಿಶ್ಚಿತ












Click it and Unblock the Notifications