ಚೆನ್ನಿಗನ ಮಣಿಸಲು ಗೌಡರ ಸೊಸೆ ಅನಿತಾ
ಬೆಂಗಳೂರು, ಡಿ. 4 : ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ ಜನಾಂಗ ಹೆಚ್ಚಿರುವ ಮಧುಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಕಸ್ತೂರಿ ಕನ್ನಡ ವಾಹಿನಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಹುರಿಯಾಳು ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಜೆಪಿ ಪಕ್ಷದಿಂದ ಸಿ ಚೆನ್ನಿಗಪ್ಪ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸುವುದು ಈಗಾಗಲೇ ಖಾತ್ರಿಯಾಗಿದೆ. ಅವರನ್ನು ಸೋಲಿಸಲೆಬೇಕು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಹಾಕಬೇಕು ಎಂದು ಅನೇಕ ದಿನಗಳಿಂದ ತೆಲೆ ಕೆಡಿಸಿಕೊಂಡಿದ್ದರು. ಆದರೆ ಕೊನೆಯಲ್ಲಿ ಅನಿತಾ ಅವರನ್ನೇ ಕಣಕ್ಕಿಸಿದರೆ ಪ್ರಬಲ ಸ್ಪರ್ಧೆಯ ಜತೆಗೆ ಜಯ ಗಳಿಸುವಲ್ಲಿ ಸಫಲರಾಗಬಹುದು ಎಂದು ಲೆಕ್ಕಾಚಾರ ಹಾಕಿರುವ ಗೌಡರು ಅನಿತಾ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕೆಎಎಸ್ ಅಧಿಕಾರಿ ವೀರಭದ್ರಯ್ಯ ಅವರನ್ನು ಮಧುಗಿರಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ನಿರ್ಧಾರಿಸಿದ್ದರು. ಈ ಸಂಬಂಧ ವೀರಭದ್ರಯ್ಯ ಕೂಡಾ ಸ್ವಯಂ ನಿವೃತ್ತಿ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಸರ್ಕಾರ ಅವರಿಗೆ ಸ್ವಯಂ ನಿವೃತ್ತಿ ನೀಡಲು ನಿರಾಕರಿಸಿದ್ದು, ಅರು ಸಲ್ಲಿಸಿದ್ದ ಅರ್ಜಿ ಮುಂದೂಡಿದ್ದಕ್ಕಾಗಿ ಅನಿವಾರ್ಯವಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications