ಡಿ.4 ರಂದು ಬಳ್ಳಾರಿ ಬಂದ್ ಗೆ ಕರೆ
ಬಳ್ಳಾರಿ, ಡಿ. 3 : ಇತ್ತೀಚೆಗೆ ಮುಂಬೈನಲ್ಲಿ ನಡೆದ ಭಯೋತ್ಪಾದನೆ ಖಂಡಿಸಿ ಡಿ. 4 ರಂದು ಹಿಂದೂ ಜಾಗರಣ ವೇದಿಕೆ ನಾಳೆ ಬಳ್ಳಾರಿ ಬಂದ್ ಗೆ ಕರೆ ನೀಡಿದೆ ಎಂದು ಸಂಘಟನೆಯ ವಿಭಾಗೀಯ ಮುಖ್ಯಸ್ಥ ಅನಿಲ ನಾಯ್ಡು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಹಿಂಸೆಗೆ ಅಸ್ಪದ ನೀಡದೆ ಪ್ರತಿಭಟನೆ ನಡೆಸಲಾಗುವುದು ಎಂದರು. ಅಲ್ಪಸಂಖ್ಯಾತರ ಒಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷದ ಮೃದು ಧೋರಣೆಯಿಂದ ಇಂದು ದೇಶಕ್ಕೆ ಗಂಡಾಂತರ ಎದುರಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ಉಗ್ರರ ಅಟ್ಟಹಾಸ ಮಟ್ಟ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ದೇಶದ ಗಡಿಭಾಗದಲ್ಲಿ ಅಗತ್ಯ ಭದ್ರತೆಯನ್ನು ನಿಯೋಜಿಸಬೇಕು ಎಂದು ಅನಿಲ್ ನಾಯ್ಡು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ರಾಜ್ಯ ಸಾರಿಗೆ ಬಸ್ ಗಳಿಗೆ ಬೆಳಿಗ್ಗೆ 9 ಘಂಟೆ ತನಕ ಸಂಚರಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಬಳ್ಳಾರಿ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಭಯೋತ್ಪಾದನೆ ವಿರೋಧಿಸಿ ಇತ್ತೀಚೆಗೆ ದಾವಣಗೆರೆಯಲ್ಲಿ ಬಂದ್ ಆಚರಿಸಲಾಯಿತು. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿಭಟನೆ, ಮೆರವಣಿಗೆ ಮತ್ತು ಬಂದ್ ಆಚರಿಸುವ ಬಗ್ಗೆ ವರದಿಗಳು ಬರುತ್ತಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications