ತಿರುಪತಿ ತಿಮ್ಮಪ್ಪನಿಗೆ ಭದ್ರತೆಯ ಕೊರತೆ ?
ತಿರುಮಲ, ಡಿ.2 : ತಿರುಮಲ ತಿರುಪತಿ ದೇವಸ್ಥಾನಕ್ಕೆ ಭದ್ರತೆಯ ಕೊರತೆ ಇದೆಯೇ? ದಿನವೊಂದಕ್ಕೆ ಕೋಟಿ ಕೋಟಿ ಆಧಾರ ಹರಿದು ಬರುವ ಈ ಶ್ರೀಮಂತ ದೇವಸ್ಥಾನ ಅಭದ್ರತೆಯ ನೆರಳಲ್ಲಿ ಬಳಲತೊಡಗಿದೆ ಎಂದರೆ ತಪ್ಪಾಗಲಾರದು. ಭದ್ರತೆಯನ್ನು ಗಣಿನೆಗೆ ತೆಗೆದುಕೊಂಡಲ್ಲಿ ಇದು ನಿಜ ಸ್ಪಷ್ಟವಾಗುತ್ತದೆ. ಭಯೋತ್ಪಾದಕರಿಗೆ ಈ ದೇವಸ್ಥಾನ ಪ್ರಯಾಸವಲ್ಲದ ಗುರಿಯಾಗುವ ಸಾಧ್ಯತೆಗಳಿವೆ ಎನ್ನುವುದು ಭಕ್ತರ ಕಳವಳವಾಗಿದೆ. ಮುಂಬೈ ಉಗ್ರರ ಅಟ್ಟಹಾಸದ ನಂತರ ಈ ಬಗ್ಗೆ ಗಂಭೀರ ಚರ್ಚೆ ನಡೆಯತೊಡಗಿದೆ.
ಆಂದ್ರಪ್ರದೇಶ ಮಾಜಿ ಡಿಜಿಪಿ ಆಂಜನೇಯ ರೆಡ್ಡಿ ಟಿಟಿಡಿ ಮಂಡಳಿಗೆ ನೀಡಿದ ವರದಿ ಪ್ರಕಾರ, ದೇವಸ್ಥಾನದಲ್ಲಿ ಒಟ್ಟು 498 ಭದ್ರತಾ ಹುದ್ದೆಗಳಿದ್ದು, ಅದರಲ್ಲಿ 317 ಹುದ್ದೆಗಳು ಇನ್ನೂ ಖಾಲಿಯಾಗಿಯೇ ಉಳಿದಿವೆ. ಹಾಗೂ ವಿಶೇಷ ಭದ್ರತಾ ದಳದ 242 ಸಿಬ್ಬಂದಿಗಳಲ್ಲಿ 33 ಸಿಬ್ಬಂದಿಗಳಿಗೆ ಮಾತ್ರ ಶಸ್ತ್ರಸಜ್ಜಿತ ಸೌಲಭ್ಯ ನೀಡಲಾಗಿದೆ. ಅದಲ್ಲದೆ ಈ ಪಡೆಯಲ್ಲಿರುವ ಹೆಚ್ಚಿನ ಸಿಬ್ಬಂದಿಗಳು ಫೈರಿಂಗ್ ತರಬೇತಿ ಅಥವಾ ಅನುಭವ ಕೂಡ ಹೊಂದಿಲ್ಲ. 95 ಜನ ಗುಮಾಸ್ತರು ಭದ್ರತಾ ಪಡೆಯ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗತೊಡಗಿರುವ ಈ ಸಂದಿಗ್ಧ ಸಮಯದಲ್ಲಿ ಐತಿಹಾಸಿಕ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವ ಕೆಲಸ ಶೀಘ್ರ ಆಗಬೇಕಿದೆ ಎನ್ನುವುದು ಭಕ್ತರ ಒತ್ತಾಯವಾಗಿದೆ.
ಮುಖ್ಯವಾಗಿ ಇಲ್ಲಿ ತುರ್ತಾಗಿ ವಿಶೇಷ ತರಬೇತಿ ಹೊಂದಿದ ಭದ್ರತಾ ಪಡೆ, ಹೆಚ್ಚುವರಿ ಪೋಲಿಸ್ ಪಡೆ ನಿಯೋಜಿಸುವ ಅವಶ್ಯಕತೆ ಇದೆ ಎಂದು ಆಂಜನೇಯ ರೆಡ್ಡಿ ತಿಳಿಸಿದ್ದಾರೆ. ತಿರುಪತಿ ಪ್ರವೇಶಕ್ಕೆ ಆಳಿಪಿರಿ ಚೆಕ್ಕಪೋಸ್ಟ್ ಇದ್ದರೂ ತಿರುಮಲಕ್ಕೆ ಅರಣ್ಯದ ಮೂಲಕ ಭಯೋತ್ಪಾದಕರಿಗೆ ಪ್ರವೇಶಿಸುವುದು ಸುಲಭವಾಗಿದೆ. ಆದ್ದರಿಂದ ಭದ್ರತೆಗಾಗಿ ತಿರುಪತಿಯಲ್ಲಿ ಪೋಲಿಸ್ ಕಮಿಷನರ್ ಕಚೇರಿ ತೆರೆಯಬೇಕೆಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications