ಸಂತಾಪ ಸೂಚನೆ ರಾಜಕೀಯಕ್ಕೆ ಸಂತಾಪ
ತಿರುವನಂತಪುರ, ಡಿ. 2 : ಪುತ್ರ ಶೋಕದಿಂದ ತೀವ್ರವಾಗಿ ನೊಂದಿದ್ದ ಸಂದೀಪ ಉನ್ನಿಕೃಷ್ಣನ್ ತಂದೆ ನಡೆದುಕೊಂಡ ರೀತಿ ತುಂಬಾ ಕೀಳು ಮಟ್ಟದ್ದಾಗಿದೆ. ಆದ್ದರಿಂದ ಅವರಲ್ಲಿ ಕ್ಷಮೆಯಾಚಿಸುವ ಪ್ರಶ್ನೆಯಿಲ್ಲ ಎಂದು ಕೇರಳದ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ತೀವ್ರ ಟೀಕೆಗಳ ನಂತರ ಒತ್ತಾಯಕ್ಕೆ ಮಣಿದು ಬೆಂಗಳೂರಿನಲ್ಲಿರುವ ಹುತಾತ್ಮ ಯೋಧ ಮೇಜರ್ ಸಂದೀಪ ಮನೆಗೆ ಕೇರಳದ ಮುಖ್ಯಮಂತ್ರಿ ಅತ್ಯುತಾನಂದನ್ ಸಂತಾಪ ಸೂಚಿಸಲು ಅವರ ಮನೆಗೆ ಭೇಟಿ ನೀಡಿದ್ದರು. ಇವರ ಜತೆಗೆ ಕೇರಳದ ಗೃಹ ಸಚಿವರೂ ಇದ್ದರು. ಪುತ್ರ ಶೋಕದಲ್ಲಿರುವ ಸಂದೀಪ್ ತಂದೆ, ಕೋಪದಲ್ಲಿ ಮುಖ್ಯಮಂತ್ರಿಯವರ ಮೇಲೆ ಹರಿಹಾಯ್ದಿದ್ದರು. ಮನೆಯೊಳಗೂ ಪ್ರವೇಶಿಸಲು ಅವಕಾಶ ನೀಡದೆ ಮುಖ್ಯಮಂತ್ರಿಯವರನ್ನು ನಿಂದಿಸಿ ಕಳುಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಅಚ್ಯುತಾನಂದನ್, ಸಂದೀಪ ಮನೆ ಅಲ್ಲದಿದ್ದರೆ ಅವರ ಮನೆಗೆ ನಾಯಿ ಕೂಡಾ ಹೋಗುತ್ತಿರಲಿಲ್ಲ ಎಂದು ಖಾರವಾಗಿ ಹೇಳಿಕೆ ನೀಡಿದ್ದರು. ಇದು ಕೇರಳದಾದ್ಯಂತ ಭಾರಿ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಇದಕ್ಕೆ ಮತ್ತೊಮ್ಮೆ ಪ್ರತಿಕ್ರಿಯಿಸಿದ ಸಿಎಂ ಅಚ್ಯುತಾನಂದನ್, ಸಂದೀಪ್ ತಂದೆ ಬಳಿ ಕ್ಷಮೆಯಾಚಿಸುವ ಪ್ರಶ್ನೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಭಾನುವಾರ ಬೆಳಿಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಂದೀಪ್ ಅವರ ಮನೆಗೆ ಭೇಟಿ ನೀಡಿದ್ದರು. ನಾವು ಅದೇ ದಿನ ರಾತ್ರಿ ಹೋಗಿದ್ದೆವು. ಎರಡು ರಾಜ್ಯದ ಮುಖ್ಯಮಂತ್ರಿಗಳು ಒಟ್ಟಿಗೆ ಹೋಗಬೇಕೆಂಬ ನಿಯಮ ಏನಾದರು ಇದೆಯಾ ಎಂದ ಅಚ್ಯುತಾನಂದ್, ಸಂದೀಪ್ ನಮ್ಮ ಮನದಲ್ಲಿ ಇದ್ದಾರೆ. ಅವರ ಬಂಧು ಬಳಗದವರನ್ನು ಕಂಡು ಸಂತಾಪ ಹೇಳಲು ಬಂದಿದ್ದೆವು. ಯೋಧರ ತಂದೆಯಾಗಿ ಉನ್ನಿಕೃಷ್ಣನ್ ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಖಾರವಾಗಿ ನುಡಿದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಉನ್ನಿಕೃಷ್ಣನ್, ರಾಜಕೀಯ ಅನಿವಾರ್ಯತೆಯಿಂದ ಇವರೆಲ್ಲ ನನ್ನ ಮಗನಿಗೆ ಸಂತಾಪ ಸೂಚಿಸಲು ಬರುತ್ತಿದ್ದಾರೆ. ಅದಕ್ಕಾಗಿಯೇ ತಾವು ಅವರೊಂದಿಗೆ ಮಾತನಾಡಲು ಒಪ್ಪಲಿಲ್ಲ. ಪುತ್ರ ಶೋಕದಿಂದ ಸ್ವಲ್ಪ ಅತಿರೇಕವಾಗಿ ವರ್ತಿಸಿದ್ದು ಹೌದು ಎಂದು ಒಪ್ಪಿಕೊಂಡರು.
ಈ ಘಟನೆ ಸಾರಿ ಹೇಳುವ ಸತ್ಯ ಹೀಗಿದೆ : ಸಾವು, ನೋವು, ಸಂತಾಪ ಸೂಚನೆ ಮತ್ತು ವ್ಯಕ್ತಿ ಗೌರವ, ಆತ್ಮಗೌರವ ಕಾಪಾಡುವ ಸಂದರ್ಭಗಳಲ್ಲೂ ನಮ್ಮ ಸಮಾಜ ಹೇಗೆ ವರ್ತಿಸುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಮೃತ ಯೋಧ ಸಂದೀಪ್ ಅವರ ತಂದೆ ಕೂಡ ನೋವಿನ ಭರದಲ್ಲಿ ಕೇರಳ ಮುಖ್ಯಮಂತ್ರಿಯನ್ನು ನಿಂದಿಸಿದುದು ತಪ್ಪು. ಅವರ ಮನೆಗೆ ನಾಯಿಯೂ ಹೋಗುತ್ತಿರಲಿಲ್ಲ ಇತ್ಯಾದಿ ಹೇಳಿಕೆ ನೀಡಿದ ಅಚ್ಯುತಾನಂದನ್ ಅವರ ಧೋರಣೆಯೂ ತಪ್ಪು. ಇವರಿಬ್ಬರನ್ನೂ ನಾವು ಕ್ಷಮಿಸಿಬಿಡೋಣ!
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications