ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನ ಸಾಧ್ಯತೆ
ಶಿವಮೊಗ್ಗ, ಡಿ. 1:ಕನ್ನಡಕ್ಕೆ ಸಂದಿರುವ ಶಾಸ್ತ್ರೀಯ ಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳು ರಾಜ್ಯದಲ್ಲಿ ರಚಿತವಾಗುವ ಸಮಿತಿಯ ಯೋಜನೆ ಹಾಗೂ ರೂಪರೇಷಗಳ ವರದಿಯನ್ನು ಆಧರಿಸಿ ನಿರ್ಧಾರವಾಗಲಿವೆ ಎಂದು ಮೈಸೂರಿನ ಸಾಹಿತಿ ಲಿಂಗದೇವರು ಹಳೆಮನಿ ಅವರು ಹೇಳಿದ್ದಾರೆ.
ಅವರು ಸೋಮವಾರ ವಾರ್ತಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ವಾರ್ತಾ ಇಲಾಖೆ ಸಂಯುಕ್ತಾಶ್ರ ಯದಲ್ಲಿ ಏರ್ಪಡಿಸಿದ್ದ ಶಾಸ್ತ್ರೀಯ ಸ್ಥಾನಮಾನದ ಸೌಲಭ್ಯಗಳು ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕನ್ನಡ ಭಾಷೆಗೆ 1500 ವರ್ಷಗಳ ಇತಿಹಾಸವಿದ್ದು, ಇದೀಗ ಶಾಸ್ತೀಯ ಸ್ಥಾನಮಾನ ಸಿಕ್ಕಿದೆಯಾದರು ಅಧಿಕೃತವಾಗಿ ಘೋಷಣೆ ಹೊರಬಂದಿಲ್ಲ. ಆದರೆ ಸದ್ಯದಲ್ಲಿಯೆ ಅಧಿಕೃತ ಘೋಷಣೆ ಹೊರಬರಲಿದೆ. ಶಾಸ್ತ್ರೀಯ ಸ್ಥಾನಮಾನದ ಸೌಲಭ್ಯಗಳನ್ನು ಸರ್ಮಪಕವಾಗಿ ಹಾಗೂ ಸಮರ್ಥನೀಯವಾಗಿ ಪಡೆಯಬೇಕಾದರೆ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಲಿಂಗದೇವರು ತಿಳಿಸಿದರು.
17ನೇ ಶತಮಾನದವರೆಗಿನ ಕನ್ನಡದ ಸಾಹಿತ್ಯ, ಸಂಸ್ಕೃತಿ, ಪ್ರಾಚ್ಯಶಿಲ್ಪ, ಹಸ್ತಪ್ರತಿ, ವಚನಗಳು, ಲೇಖನಗಳ ಕುರಿತಂತೆ ಅಧ್ಯಯನ, ಸಂಶೋಧನೆ, ದಾಖಲೀಕರಣ, ಪುನರ್ ಮುದ್ರಣ ಮುಂತಾದ ಕಾರ್ಯಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡು ವ ಹಣವನ್ನು ಬಳಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದ ಅವರು, ಪ್ರಾಚೀನ ಕನ್ನಡ ಭಾಷೆಯಲ್ಲಿರುವ ಪಠ್ಯಗಳು, ಸಾಹಿತ್ಯ ಗದ್ಯ ಪದ್ಯಗಳ ಮೇಲೆ ಅಧ್ಯಯನವನ್ನು ನಡೆಸಿ ಆಧುನಿಕ ಕನ್ನಡದ ಬೆಳವಣಿಗೆಗೆ ಮಾರ್ಗಸೂಚಿ ಮಾಡಿಕೊಳ್ಳುವ ಇಂಗಿತವನ್ನು ಲಿಂಗದೇವರು ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಬರಬಹುದಾದ ಅನುದಾನದ ಬಳಕೆ ಬಗ್ಗೆ ಬಹಳಷ್ಟು ಚರ್ಚೆಗಳು ಆರಂಭವಾಗಿವೆ. ಆದರೆ ಪ್ರಾಚೀನ ಕನ್ನಡದ ಅಧ್ಯಯನ, ಸಂಶೋಧನೆಗಳಿಗೆ ಹೆಚ್ಚು ಅವಕಾಶವಿರುವುದಾಗಿ ಅವರು ತಿಳಿಸಿದರು.
ಪ್ರಸಿದ್ಧ ವಿದ್ವಾಂಸರ ನೇತೃತ್ವದಲ್ಲಿ ರಚಿತವಾಗುವ ಸಮಿತಿಯು ಕೈಗೊಳ್ಳುವ ನಿರ್ಧಾರ ನಿರ್ಣಯ, ಮಾರ್ಗಸೂಚಿ ಹಾಗೂ ವರದಿಯ ಆಧಾರದ ಮೇಲೆ ಬಹುತೇಕ ಕೇಂದ್ರ ಸರ್ಕಾರ ಅನುದಾನ ನೀಡಲಿದೆ. ಈ ದಿಸೆಯಲ್ಲಿ ಬಹುದೊಡ್ಡ ಜವಾಬ್ದಾರಿ ಹಾಗೂ ಸವಾಲುಗಳಿವೆ ಎಂಬುದನ್ನು ಮರೆಯಬಾರದೆಂಬುದನ್ನು ಸೂಕ್ಷ್ಮವಾಗಿ ಹೇಳಿದರು. ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ಕನ್ನಡ ಪೀಠಗಳು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರತಿಭಾನ್ವಿತ ಕನ್ನಡದ ಸಂಶೋಧಕರಿಗೆ ನೀಡಬಹುದಾಗಿದೆ ಎಂದರಲ್ಲದೆ, ಸಮರ್ಥ ಹಾಗೂ ಸಮರ್ಪಕ ಯೋಜನೆ ರೂಪಿಸಿದರೆ ಕೇಂದ್ರದಿಂದ ಸಾಕಷ್ಟು ಹಣ ಪಡೆಯಲು ಅವಕಾಶವಿದೆ ಎಂಬುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿವರಸಿದರಲ್ಲದೆ, ತಿಂಗಳ ಅತಿಥಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರಲ್ಲದೆ ಕೆಳದಿ ಚನ್ನಮ್ಮ ಪುಸ್ತಕ ಬಿಡುಗಡೆ ಮಾಡಿದರು.
ಮಾರ್ಪಳ್ಳಿ ಮಂಜುನಾಥ್ ಹೊರತಂದಿರುವ ಕೆಳದಿ ರಾಣಿಚನ್ನಮ್ಮ ಪುಸ್ತಕ ಕುರಿತಂತೆ ಮಾತನಾಡಿದ ಡಾ:ಕೆಳದಿ ವೆಂಕಟೇಶ್ ಜೋಯಿಸ್ ಅವರು ರಾಣಿಚನ್ನಮ್ಮನ ಹೋರಾಟ ಬದುಕಿನ ಮಹತ್ವಗಳನ್ನು ವಿಶ್ಲೇಷಿಸಿದರು.
(ದಟ್ಸ್ ಕನ್ನಡವಾರ್ತೆ)











Click it and Unblock the Notifications