ಆರ್ಥಿಕ ಬಿಕ್ಕಟ್ಟ್ಟಿನ ನಡುವೆ 12 ಯೋಜನೆಗಳು ಜಾರಿ
ಬೆಂಗಳೂರು, ನ. 20 : ವಿದ್ಯುತ್ ಉತ್ಪಾದನೆ, ಅಟೋಮೊಬೈಲ್ , ಸಕ್ಕರೆ, ಸಿಮೆಂಟ್ ಕಾರ್ಖಾಮೆ ಸೇರಿದಂತೆ 7,080 ಕೋಟಿ ರು ಗಳ ಬಂಡವಾಳ ಹೂಡಿಕೆಯ 12 ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಈ ಅನುಮೋದನೆ ನೀಡಿದ್ದು, 82393 ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಬೆಳಗಾವಿ , ದಕ್ಷಿಣ ಕನ್ನಡ, ರಾಮನಗರ, ಮೈಸೂರು ಜಿಲ್ಲೆಗಳಲ್ಲಿ ಈ ಕೈಗಾರಿಕೆಗಳು ಸ್ಫಾಪನೆಗೊಳ್ಳಲಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸೇರಿದ ಸಿಮೆಂಟ್ ಕಾರ್ಖಾನೆಯ ವಿಸ್ತರಣೆಗೂ ಅನುಮತಿ ನೀಡಲಾಗಿದೆ. ರಾಯಚೂರಿನಲ್ಲಿ 600 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳನ್ನು ಸ್ಫಾಪಿಸಲು ಅನಮತಿ ನೀಡಲಾಗಿದೆ. ಇದಕ್ಕಾಗಿ ರಾಯಚೂರು ಬಳಿ ಚಿಕ್ಕಸೂಗೂರು ಬಳಿ 234 ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಯೋಜನೆಗಳ ವಿವರ
ಆಟೋಮೊಬೈಲ್, ವಿದ್ಯುತ್, ಐಟಿ,ಐಟಿಇಎಸ್ ಪಾರ್ಕ್, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಂಕೀರ್ಣ, ಸಕ್ಕರೆ, ಸಿಮೆಂಟ್, ಏರೋಸ್ಪೇಸ್, ರಬ್ಬರ್ ಪಾರ್ಕ್ ಹಾಗೂ ಪ್ಲಾಸ್ಟಿಕ್ ಉದ್ಯಮಗಳಿಗೆ ಮಂಜೂರಾತಿ ನೀಡಲಾಗಿದೆ.
ಜಾಗತಿಕ ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 2009ನೇ ಜನವರಿ 15-16ರಂದು ನಡೆಯಬೇಕಾಗಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಮೇಳವನ್ನು ಕೈಗಾರಿಕಾ ಸಂಘ-ಸಂಸ್ಥೆಗಳ ಸಲಹೆಯಂತೆ ಸದ್ಯಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications