ವಿಧಾನ ಪರಿಷತ್ ಚುನಾವಣೆ ಫಲಿತಾಂಶಕ್ಕೆ ಹರ್ಷ
ಬೆಂಗಳೂರು, ನ, 3 : ಬೆಳಗಾವಿ, ಧಾರವಾಡ ಮತ್ತು ಕೊಡಗು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮೂಲಕ ಪಾರಮ್ಯ ಮೆರೆದಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದರು. ದಕ್ಷಿಣ ಭಾರತದಲ್ಲಿ ಪ್ರಥಮ ಭಾರಿಗೆ ಭಾರತೀಯ ಜನತಾ ಪಕ್ಷದ 150 ನೇ ದಿನ ಪೂರೈಸಿರುವ ಸಂಭ್ರಮದ ಗಳಿಗೆಯಲ್ಲಿ ಸರ್ಕಾರದ ಆಡಳಿತದ ಕೈಗನ್ನಡಿಗೆ ಈ ಗೆಲುವೆ ಸಾಕ್ಷಿ ಎಂದು ಅವರು ಸಂತಸದ ನಗೆಬೀರಿದರು.
ಮೂರು ಕ್ಷೇತ್ರಗಳ ಫಲಿತಾಂಶ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದು ಹರಸಾಹಸ ಮಾಡಿದರು, ಆದರೆ, ಮತದಾರ ಪ್ರಭುವಿನ ಮುಂದೆ ಯಾವ ಆಟವೂ ನಡೆಯುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಕೈಗನ್ನಡಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮತದಾರರು ಮತ್ತೊಮ್ಮೆ ಪಾಠ ಕಲಿಸಿದ್ದಾರೆ. ಇದನ್ನು ಅರಿತು ಈ ಪಕ್ಷಗಳ ನಾಯಕರು ಪಾಠ ಕಲಿಯಲು ಉತ್ತಮ ಸಮಯ ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಹಾಗೂ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಜೊತೆಗೆ ಅಧಿಕಾರ ವಿಕೇಂದ್ರಿಕರಣ ಮಾಡಲಾಗುವುದು ಎಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಫಲಿತಾಂಶ ಬಿಜೆಪಿ ಪರ ಬಂದಿದೆ ಎಂದು ಯಡಿಯೂರಪ್ಪ ಗೆಲುವನ್ನು ಸಮರ್ಥಿಸಿಕೊಂಡರು. ಸರ್ಕಾರದ 150 ದಿನದಲ್ಲಿ ಮಾಡಿದ ಅಭಿವೃದ್ಧಿಪರ ಸಾಧನೆಯಿಂದ ಮತದಾರರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದರು. ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವಿನಾಕಾರಣ ಆರೋಪ ಮಾಡದೆ, ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಪ್ರತಿಪಕ್ಷಗಳ ನಾಯಕರಿಗೆ ಮನವಿ ಮಾಡಿಕೊಂಡರು.
(ದಟ್ಸ್
ಕನ್ನಡ
ವಾರ್ತೆ)
ವಿಧಾನ
ಪರಿಷತ್
ಚುನಾವಣೆಯಲ್ಲಿ
ಬಿಜೆಪಿಗೆ
ಗೆಲುವು