ಭಜರಂಗ ದಳ, ವಿಎಚ್ ಪಿ ನಿಷೇಧಿಸಿ: ಅಗ್ನಿವೇಶ್
ಶಿಮಂತೂರು (ದಕ್ಷಿಣಕನ್ನಡ), ಅ.20: ವಿಶ್ವ ಹಿಂದು ಪರಿಷತ್ತು(ವಿಎಚ್ ಪಿ) ಹಾಗೂ ಭಜರಂಗ ದಳದ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಬೇಕು ಎಂದು ವಿಶ್ವ ಆರ್ಯ ಸಮಾಜ ಮಂಡಳಿ ಅಧ್ಯಕ್ಷ ಸ್ವಾಮಿ ಅಗ್ನಿವೇಶ್ ಭಾನುವಾರ ಹೇಳಿದ್ದಾರೆ.
ಆರ್ಯ ಸಮಾಜದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ವಿಎಚ್ ಪಿ ಹಾಗೂ ಭಜರಂಗ ದಳಗಳು ದೇಶದ ಕೋಮು ಗಲಭೆಗಳಿಗೆ ಕಾರಣವಾಗುತ್ತಿವೆ.ಇತರ ಮತಧರ್ಮಗಳನ್ನು ದ್ವೇಷಿಸುವಂತೆ ಉಪದೇಶಿಸುತ್ತಿವೆ ಎಂದು ಸ್ವಾಮಿ ಅಗ್ನಿವೇಶ್ ಆರೋಪಿಸಿದರು. ''ವಿಎಚ್ ಪಿ ಹಾಗೂ ಭಜರಂಗ ದಳಗಳು ನೀತಿ ನಿಯಮಗಳನ್ನು ಮುರಿದು ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವುದು ತಪ್ಪು'' ಎಂದರು.
ಇತ್ತೀಚೆಗೆ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯಿಸುತ್ತಾ, ''ಕೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಯನ್ನು ನಾನು ಖಂಡಿಸುತ್ತೇನೆ. ಸಮಾಜವನ್ನು ಇಬ್ಭಾಗಿಸುವಲ್ಲಿ ಈ ಸಂಘಟನೆಗಳ ಕೈವಾಡ ಇದೆ. ಈ ಬಗ್ಗೆ ಕೆಲವರು ರಾಜಕೀಯ ಕಾರ್ಯ ಸೂಚಿಯನ್ನು ಸಹ ಹೊಂದಿದ್ದಾರೆ. ಈ ರೀತಿಯ ಬೆಳವಣಿಗೆಗಳನ್ನು ಸಾರ್ವಜನಿಕವಾಗಿ ಖಂಡಿಸುತ್ತೇನೆ. ಕೋಮು ಸಾಮರಸ್ಯಕ್ಕೆ ಭಂಗ ತರುವವರನ್ನು ಬಂಧಿಸಬೇಕು. ಇದಕ್ಕೆ ಕಾರಣವಾದ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು'' ಎಂಡು ಕಟುವಾಗಿ ಟೀಕಿಸಿದರು.
ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಭಜರಂಗ ದಳ ರಾಜ್ಯ ಘಟಕ ಅಧ್ಯಕ್ಷ ಮಹೇಂದ್ರ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ ಬಗ್ಗೆ ಸ್ವಾಮಿ ಅಗ್ನಿವೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದು ಶ್ಲಾಘನೀಯ ಬೆಳವಣಿಗೆ ಎಂದರು.
ಬಲವಂತ ಮತಾಂತರವನ್ನು ಆರ್ಯ ಸಮಾಜ ಖಂಡಿಸುತ್ತದೆ. ಇದನ್ನು ನಿಲ್ಲಿಸಬೇಕು.ಬಲವಂತ ಮತಾಂತರವನ್ನು ಸಾಕ್ಷಾಧಾರಗಳ ಮೂಲಕ ನ್ಯಾಯಾಲಯದಲ್ಲಿ ಸಾಬೀತು ಪಡಿಸಬೇಕು. ಈ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಅದು ಬಿಟ್ಟ್ಟು ತಾವೇ ನ್ಯಾಯಾಧೀಶರಂತೆ ನಡೆದುಕೊಳ್ಳಬಾರದು. ಕಾನೂನನ್ನು ಕೈಗೆತ್ತಿಕೊಂಡು ಶಿಕ್ಷಿಸುವುದು ತಪ್ಪು ಎಂದು ಸ್ವಾಮಿ ಅಗ್ನಿವೇಶ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸದ್ಯಕ್ಕೆ ಭಜರಂಗದಳದ ನಿಷೇಧವಿಲ್ಲ: ಕೇಂದ್ರ
ಭಜರಂಗ ಮುಖಂಡ ಮಹೇಂದ್ರ ರಾಜೀನಾಮೆ
ಚಿತ್ರದುರ್ಗ : ಸ್ವಾಮಿ ಅಗ್ನಿವೇಶ್ ಗೆ ಬಸವಶ್ರೀ ಪುರಸ್ಕಾರ












Click it and Unblock the Notifications