525 ಮುಸ್ಲಿಂ ಜೋಡಿಗಳ ಸಾಮೂಹಿಕ ಮದುವೆ
ಬಳ್ಳಾರಿ, ಅ.20: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾನುವಾರ 525 ಮುಸ್ಲಿಂ ಜೋಡಿಗಳು ವಿವಾಹ ಜೀವನಕ್ಕೆ ಕಾಲಿರಿಸಿದರು.
ರಾಜ್ಯ ಸರಕಾರದ ಆದರ್ಶ ವಿವಾಹ ಯೋಜನೆಯಡಿ ನವ ವಿವಾಹಿತರಿಗೆ ರು.10,000ದ ಚೆಕ್ ಗಳನ್ನು ವಿತರಿಸಲಾಯಿತು. ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜಿ.ಜನಾರ್ಧನ ರೆಡ್ಡಿ ಹಾಗೂ ಹಜ್, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಮುಮ್ತಾಜ್ ಆಲಿ ಖಾನ್ ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಿವಾಹಿತರಿಗೆ ಶುಭ ಕೋರಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರನ್ನು ಸಚಿವ ಮುಮ್ತಾಜ್ ಆಲಿ ಖಾನ್ ಪ್ರಶಂಸಿದರು. ''ಮುಸ್ಲಿಂರ ಸಾಮೂಹಿಕ ವಿವಾಹವನ್ನು ಹಿಂದುಗಳು ಆಯೋಜಿಸುವ ಮೂಲಕ ಕೋಮುಸಾಮರಸ್ಯ ಮೆರೆದಿದ್ದಾರೆ'' ಎಂದು ಖಾನ್ ಪ್ರತಿಕ್ರಿಯಿಸಿದರು. ತಂದೆ ತಾಯಿಯರನ್ನು ಮರೆಯಬೇಡಿ. ಕೈಹಿಡಿದ ಪತ್ನಿಯನ್ನು ಪ್ರೀತಿಯಿಂದ ನೋಡಿ ಕೊಳ್ಳಿ ಎಂದು ವಧುವರರಿಗೆ ಖಾನ್ ಸಾಹೇಬರು ಕಿವಿಮಾತು ಹೇಳಿದರು.
ಮುಸ್ಲಿಂರ ಸಾಮೂಹಿಕ ವಿವಾಹವನ್ನು ಆಯೋಜಿಸಬೇಕೆನ್ನುವುದು ಶ್ರೀರಾಮುಲು ಅವರ ಕನಸಾಗಿತ್ತು, ಅದು ಈ ವರ್ಷ ನನಸಾಯಿತು ಎಂದು ಜಿ.ಜನಾರ್ಧರನ ರೆಡ್ಡಿ ಹೇಳಿದರು. ಈ ರೀತಿಯ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮುಂದೆಯೂ ಆಗಿಂದಾಗ್ಗೆ ಹಮ್ಮಿಕೊಳ್ಳುವುದಾಗಿ ಜನಾರ್ಧನ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಜಿ.ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ್ಪ, ನೇಮಿ ನಾಯಕ್, ಟಿ.ಎಚ್.ಸುರೇಶ್ ಬಾಬು, ಚಂದ್ರ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಪುಷ್ಪ ರೇಖಾ, ಮೇಯರ್ ಶೋಭಾ ನಾರಾಯಣ್, ಜಿಲ್ಲಾಧಿಕಾರಿ ಬಿ.ಶಿವಪ್ಪ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)