ಕೇಂದ್ರ ಮಲತಾಯಿ ಧೋರಣೆ ವಿರೋಧಿಸಿ :ಬಿಎಸ್ ವೈ
ಬೆಂಗಳೂರು, ಅ. 20 : ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ತನ್ನ ಅಸಹಕಾರ ಮುಂದುವರೆಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದರು. ಮುಂದಿನ ವಾರ ಸರ್ವಪಕ್ಷಗಳ ನಿಯೋಗಗಳೊಂದಿಗೆ ದೆಹಲಿಗೆ ತೆರಳಿ ರಾಜಘಾಟ್ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಸೋಮವಾರ ಗೃಹ ಕಚೇರಿ 'ಕೃಷ್ಣ'ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷಗಳ ನಿಯೋಗದಲ್ಲಿ ಎಲ್ಲ ಪಕ್ಷಗಳ ಎಂಎಲ್ಎಗಳು, ಎಂಎಲ್ಸಿಗಳು, ಸಂಸದರು ಸೇರಿ ಒಟ್ಟು 325 ಮಂದಿಯೊಂದಿಗೆ ದೆಹಲಿಗೆ ತೆರಳುವುದಾಗಿ ಹೇಳಿದರು. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಹೈದರಾಬಾದ್-ಕರ್ನಾಟಕ ವಿಶೇಷ ಅನುದಾನ, ನೆರೆ ಪರಿಹಾರ, ಬರ ಪರಿಹಾರ ನೀಡುವುದು ಸೇರಿದಂತೆ ರಾಜ್ಯ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಧೋರಣೆಯಿಂದ ತೀವ್ರ ಬೇಸರ ಉಂಟಾಗಿದೆ ಎಂದು ವಿಷಾಧಿಸಿದ ಅವರು, ಒಕ್ಕೂಟ ವ್ಯವಸ್ಥೆಗೆ ಕಳಂಕ ತಂದಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಜ್ಯದ ವಿಷಯದಲ್ಲಿ ಸೇಡಿನ ರಾಜಕಾರಣ ನಡೆಸಿದ್ದಾರೆ ಎಂದು ಆಪಾದಿಸಿದರು.
ಸರ್ವ ಪಕ್ಷಗಳ ನಿಯೋಗಕ್ಕೆ ನೈತಿಕತೆ ಇಲ್ಲ ಕುಮಾರಸ್ವಾಮಿ
ರಾಜ್ಯ ಅಭಿವೃದ್ಧಿ ಕುರಿತ ಸರ್ವಪಕ್ಷ ನಿಯೋಗ ದೆಹಲಿಗೆ ತೆರಳುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಬಿಜೆಪಿ ಸರ್ಕಾರದ ಸರ್ವಪಕ್ಷಗಳ ನಿಯೋಗಕ್ಕೆ ನೈತಿಕತೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸಮರ್ಥವಾಗಿ ಕೆಲಸ ಮಾಡದ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ಹರಿಯಯತೊಡಗಿದೆ ಎಂದು ಟೀಕಿಸಿದರು. ಉಪಚುನಾವಣೆಗೆ ವೇದಿಕೆ ಸಜ್ಜುಗೊಳಿಸಲು ಕಸರತ್ತು ನಡೆಸಿದೆ ಎಂದು ಆರೋಪಿಸಿದ ಅವರು, ಬಿಜೆಪಿ ನಾಟಕ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)