ತಮಿಳರ ನರಮೇಧಕ್ಕೆ ಕರುಣಾನಿಧಿ ಆಕ್ರೋಶ
ಚೆನ್ನೈ, ಅ. 7 : ಶ್ರೀಲಂಕಾದಲ್ಲಿ ತಮಿಳರ ಮಾರಣಹೋಮ ನಡೆಯುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಕೇಂದ್ರದ ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆಯಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಲಂಕಾದ ಕಿಲಿನೊಚಿಯಲ್ಲಿರುವ ಎಲ್ ಟಿಟಿಇ ಶಿಬಿರದ ಪಕ್ಕದಲ್ಲಿ ಬೀಡು ಬಿಟ್ಟಿರುವ ಲಂಕಾ ಪಡೆ ತಮಿಳರ ಮೇಲೆ ದಾಳಿ ನಡೆಸಿ ಹತ್ಯೆಗೈಯತೊಡಗಿದೆ. ಇದು ತಮಿಳರ ಪಾಲಿಗೆ ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು. ಈ ಕುರಿತು ಭಾರತೀಯ ರಾಷ್ಟ್ರೀಯ ಸಲಹೆಗಾರ ಎಂ.ಕೆ.ನಾರಾಯಣನ್ ತಮ್ಮ ಅಸಮಾಧಾನವನ್ನು ಶ್ರೀಲಂಕಾದ ರಾಯಭಾರಿಗೆ ತಿಳಿಸಿದ್ದರೂ ನರಮೇಧ ಮುಂದುವರೆದಿರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು 70 ಸಾವಿರಕ್ಕೂ ಅಧಿಕ ತಮಿಳನ್ನು ಲಂಕಾ ಸರ್ಕಾರ ಹತ್ಯೆ ಮಾಡಿದೆ. ನ್ಯಾಯಯುತವಾದ ಬೇಡಿಕೆಯನ್ನ ಪುರಸ್ಕರಿಸದ ಸರ್ಕಾರ, ತಮಿಳರಿಗೆ ತೀವ್ರ ಕಿರುಕುಳ ನೀಡುತ್ತಿದೆ. ನ್ಯಾಯ ಕೇಳುವವರನ್ನು ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಿ ಕೊಲೆ ಮಾಡಲಾಗುತ್ತಿದೆ. ಇದು ಮೂರು ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಕಿಡಿಕಾರಿದರು.
ಲಂಕಾದಲ್ಲಿರುವ ತಮಿಳರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಭಾರತ ಸರ್ಕಾರ ಶ್ರೀಲಂಕಾ ಸರ್ಕಾರಕ್ಕೆ ಸ್ಪಷ್ಟವಾದ ನಿರ್ದೇಶನ ನೀಡಬೇಕು. ತಮಿಳರ ಮೇಲೆ ಆಗುತ್ತಿರುವ ದಾಳಿಯನ್ನು ತಡೆಯಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮೀನಮೇಷ ಎಣಿಸಿದಲ್ಲಿ ಬೆಂಬಲ ವಾಪಸ್ಸು ಪಡೆಯಲು ಚಿಂತನೆ ನಡೆಸಬೇಕಾಗುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)