ಬೆಂಗಳೂರು ಪೊಲೀಸರಿಗೆ ಹಬ್ಬದ ಸಂಭ್ರಮ ಇಲ್ಲ
ಬೆಂಗಳೂರು, ಸೆ.30: ರಾಜ್ಯದೆಲ್ಲೆಡೆಯೂ ದಸರಾ ಸಂಭ್ರಮ ಶುರುವಾಗಿದೆ. ಜನತೆ ಸಡಗರ ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿದ್ದರೆ ಪೊಲೀಸರು ಮಾತ್ರ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನಲ್ಲಿರುವ 22,000 ಪೊಲೀಸರಿಗೆ ಹಬ್ಬದ ಸಂಭ್ರಮ ಇಲ್ಲ.ಯಾವುದೇ ಕಾರಣಕ್ಕೂ ರಜೆ ಕೊಡುವುದಿಲ್ಲ ಎಂದು ಪೊಲೀಸ್ ಇಲಾಖೆ ಕಟ್ಟಾಜ್ಞೆ ಮಾಡಿದೆ. ಆದ್ದರಿಂದ ಲಾಠಿ ಹಿಡಿದು ಡ್ಯೂಟಿ ಮಾಡಲೇ ಬೇಕು. ಚರ್ಚ್ ಗಳ ಮೇಲೆ ದಾಳಿ ನಡೆಯದಂತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯಲೇ ಬೇಕಾದ ಪರಿಸ್ಥಿತಿ.
ರಾಜ್ಯದ ನಾನಾ ಕಡೆಗಳಲ್ಲಿ ಚರ್ಚ್ ಗಳ ಮೇಲಿನ ದಾಳಿ ನಡೆದು ಅದು ಬೆಂಗಳೂರಿಗೂ ವಿಸ್ತರಿಸಿ ಗಂಗೊಂಡನಹಳ್ಳಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಗೊಂಡಿತ್ತು.ಈ ಕಾರಣಕ್ಕೆ ಯಾವೊಬ್ಬ ಪೊಲೀಸ್ ಗೂ ರಜೆ ಕೊಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ತಾಕೀತು ಮಾಡಿದೆ. ಬೆಂಗಳೂರು ನಗರದಲ್ಲಿ ಅಪರಾಧಗಳ ಪ್ರಮಾಣ ಹೆಚ್ಚುತ್ತಿದ್ದು ಗರಿಷ್ಠ ಮಟ್ಟ ತಲುಪಿದ್ದು, ಅಪರಾಧಿಗಳ ಪತ್ತೆಯ ಪ್ರಮಾಣ ಮಾತ್ರ ತಳಮುಟ್ಟಿದೆ. ಈ ನಿಟ್ಟಿನಲ್ಲಿ ನಗರದ ಜನತೆಗೆ ಶಾಂತಿ ಭದ್ರತೆ ಕಲ್ಪಿಸಲು ಪೊಲೀಸ್ ರಜೆ ಕೊಡದಂತೆ ಇಲಾಖೆ ದೃಢ ನಿರ್ಧಾರ ಕೈಗೊಂಡಿದೆ. ಆದರೆ ಸೂಕ್ತ ವೈದ್ಯಕೀಯ ಕಾರಣಗಳಿದ್ದರಷ್ಟೆ ರಜೆ ಕೊಡಲಾಗುತ್ತದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರಿನಲ್ಲಿ ಒಟ್ಟು 104 ಪೊಲೀಸ್ ಠಾಣೆಗಳಿವೆ. 38 ಠಾಣೆಗಳ 15,000 ಪೊಲೀಸರು ನಗರದ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ. ಅಪರಾಧಿ ವಿಭಾಗದ ಪೊಲೀಸರು(ಸಿಎಆರ್) ಹಾಗೂ ಮೀಸಲು ಪೊಲೀಸರು(ಕೆ ಎಸ್ ಆಪ್ ಪಿ) ಸೇರಿದಂತೆ ಬೆಂಗಳೂರಿನಲ್ಲಿ ಒಟ್ಟು 22,000 ಮಂದಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
''ರಾಜ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಧಾರ್ಮಿಕ ಸ್ಥಳಗಳು ಹಾಗೂ ಅಲ್ಪ ಸಂಖ್ಯಾತರ ಪ್ರಾರ್ಥನಾ ಮಂದಿರಗಳಿಗೆ ಗರಿಷ್ಠ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ'' ಎನ್ನುತ್ತಾರೆ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್.ಪೂಜಾರ್. ಬಹಳಷ್ಟು ಮಂದಿ ಪೊಲೀಸರನ್ನು ಚರ್ಚ್ ಗಳ ಬಳಿ ನಿಯೋಜಿಸಲಾಗಿದೆ. ಹಾಗಾಗಿ ಯಾರಿಗೂ ರಜೆ ನೀಡದಿರುವಂತೆ ನಿರ್ಧರಿಸಲಾಗಿದೆ ಎಂದರು.
''ಬೆಂಗಳೂರಿನಲ್ಲಿ 600 ಸಣ್ಣ ಚರ್ಚ್ ಗಳು ಸೇರಿದಂತ ಬರೋಬ್ಬರಿ 800 ಚರ್ಚ್ ಗಳಿವೆ. ಪೊಲೀಸ್ ಇಲಾಖೆ ನಿರ್ದೇಶನದಂತೆ ಸಣ್ಣ ಚರ್ಚ್ ಗಳಿಗೆ ಕನಿಷ್ಠ 3 ಮಂದಿ ಪೊಲೀಸರ ಭದ್ರತೆ ಒದಗಿಸಲಾಗಿದೆ. ದೊಡ್ಡ ಚರ್ಚ್ ಗಳಿಗೆ ಕೆಎಸ್ಆರ್ ಪಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ. ದಿನದ ಇಪ್ಪತ್ತ ನಾಲ್ಕು ಗಂಟೆಗಳ ಕಾಲ 5,000 ಮಂದಿ ಪೊಲೀಸರು ಚರ್ಚ್ ಹಾಗೂ ಅಲ್ಪ ಸಂಖ್ಯಾತರ ಪ್ರಾರ್ಥನಾ ಮಂದಿರಗಳನ್ನು ಕಾವಲು ಕಾಯುತ್ತಿದ್ದಾರೆ'' ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ. ಇದರ ಜೊತೆಗೆ ಪೊಲೀಸ್ ಇಲಾಖೆ ಗೃಹ ರಕ್ಷಕ ದಳದ ಸಿಬ್ಬಂದಿಯ ನೆರವನ್ನೂ ಪಡೆದಿದೆ.
''ಕಳೆದ ಕೆಲ ವರ್ಷಗಳಿಂದ ನಮ್ಮ ಮನೆಯವರೊಂದಿಗೆ ಒಟ್ಟಿಗೆ ತರೀಕೆರೆ ಉತ್ಸವ ನೋಡಲು ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದ ತೀರ್ಥೋತ್ಸವ ನೋಡಲು ಹೋಗುತ್ತಿದೆ. ಈ ವರ್ಷ ಉತ್ಸವ ಅ.11 ಹಾಗೂ ಅ.13 ರಂದು ನಡೆಯುತ್ತಿವೆ. ರಜೆ ಕೊಡದ ಕಾರಣ ಈ ವರ್ಷದ ಉತ್ಸವಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ'' ಎನ್ನುತ್ತಾರೆ ಬೆಂಗಳೂರು ಕೇಂದ್ರ ಅಪರಾಧಿ ದಳದ ಸಬ್ ಇನ್ಸ್ ಪೆಕ್ಟರ್.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications