ಚಾಮುಂಡದೇವಾಲಯ ಕಾಲ್ತುಳಿತಕ್ಕೆ144 ಬಲಿ
ಜೈಪುರ, ಸೆ. 30 : ನವರಾತ್ರಿ ಹಬ್ಬದ ಆಚರಣೆ ಸಂದರ್ಭದಲ್ಲಿ ದೇಗುಲದ ಗೋಡೆ ಕುಸಿದಿದ್ದರಿಂದ ಸುಮಾರು 144ಕ್ಕೂ ಹೆಚ್ಚು ಮಂದಿ ಕಾಲ್ತುಳಿತಕ್ಕೆ ಮೃತಪಟ್ಟಿರುವ ಧಾರುಣ ಘಟನೆ ಜೋಧಪುರ್ ಜಿಲ್ಲೆಯ ಮೆಹರನ್ ಗಢ್ ದ ಐತಿಹಾಸಿಕ ಚಾಮುಂಡ ಮಾತಾ ದೇವಾಲದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ದಸರಾ ಹಬ್ಬದ ನಿಮಿತ್ತ ನವರಾತ್ರಿ ಆಚರಣೆಗೆ ಇಲ್ಲಿ ಪ್ರತಿ ವರ್ಷ ಸಾವಿರಾರು ಭಕ್ತಾಧಿಗಳು ಸೇರುತ್ತಿದ್ದರು. ದಸರಾ ಆರಂಭ ದಿನವಾದ ಇಂದು ಬೆಳಗ್ಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ದೇವಾಲಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ದೇವಾಲಯದ ಗೋಡೆ ಕುಸಿದಿದೆ. ಇದರಿಂದ ನೂಕನುಗ್ಗಲು ಆರಂಭವಾಗಿ ಸುಮಾರು 144ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 250 ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಜೋಧಪುರ್ ಜಿಲ್ಲೆಯ ಜಿಲ್ಲಾಧಿಕಾರಿ ಕಿರಣ್ ಸೋನಿ ಗುಪ್ತಾ ತಿಳಿಸಿದ್ದಾರೆ.
ಕಾಲ್ತುಳಿತದಿಂದ ಸಾವನ್ನಪ್ಪಿರುವವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ, ಘಟನೆಯಲ್ಲಿ 250 ಹೆಚ್ಚು ಜನರು ಗಾಯಗೊಂಡಿದ್ದು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಸಾವು-ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ರಾಜಸ್ಥಾನ ಸರ್ಕಾರದ ಗೃಹ ಸಚಿವ ಗುಲಾಬ್ ಚಂದ ಕಟಾರಿಯಾ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications