ಚರ್ಚ್ ದಾಳಿಗೆ ಜ್ಞಾನಪೀಠ ಸಾಹಿತಿಗಳ ಖಂಡನೆ
ಬೆಂಗಳೂರು, ಸೆ.20: ರಾಜ್ಯದ ನಾನಾ ಪ್ರದೇಶಗಳಲ್ಲಿ ಚರ್ಚ್ ಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಜ್ಞಾನ ಪೀಠ ಪುರಸ್ಕೃತರಾದ ಡಾ.ಯು.ಆರ್.ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ತೀವ್ರವಾಗಿ ಖಂಡಿಸಿದ್ದಾರೆ. ದಾಳಿಯನ್ನು ತಡೆಗಟ್ಟಲು ವಿಫಲವಾಗಿರುವ ಈ ಸರ್ಕಾರ ನಾಚಿಕೆಗೇಡು ಹಾಗೂ ಲಜ್ಜೆಗೆಟ್ಟ ಸರ್ಕರವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಸಾಹಿತಿಗಳಾದ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಸರ್ಕಾರದ ವಿರುದ್ಧ ಶನಿವಾರ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ದಾಳಿ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕ್ರೈಸ್ತ ಸಮುದಾಯಕ್ಕೆ ಭದ್ರತೆ ಒದಗಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಘಪರಿವಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅನಂತಮೂರ್ತಿ ಅವರು, ಇಂದು ಧರ್ಮವನ್ನು ಉಳಿಸಿದವರು ಸಂತರೇ ಹೊರತು ಆರ್ ಎಸ್ ಎಸ್ ಆಗಲಿ, ಭಜರಂಗದಳವಾಗಲಿ ಅಲ್ಲ. ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲದ ಅಜ್ಞಾನಿಗಳು ಅವರು ಎಂದರು. ಸಂಘಪರಿವಾರದವರು ಹಿಂದು ಧರ್ಮದ ವಿರೋಧಿಗಳು. ಬೌದ್ಧ ಧರ್ಮಕ್ಕೆ ಮತಾಂತರವಾದ ಹಿಂದೂ ಧರ್ಮೀಯರನ್ನು ಶಂಕರಾಚಾರ್ಯರು ಕರೆ ತಂದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮತಾಂತರ ಎಂಬುದು ಹೃದಯದ ಪರಿವರ್ತನೆಯಾಗಬೇಕು ಆಗ ಮಾತ್ರವೆ ಧರ್ಮಕ್ಕೆ ಅಪಚಾರ ಆಗದು. ಸರ್ಕಾರ ನ್ಯಾಯಾಂಗ ತನಿಖೆಗೆ ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದು ಪ್ರತಿಕ್ರಿಯಿಸಿದರು.
ಗಿರೀಶ್ ಕಾರ್ನಾಡ್ ಖಂಡನೆ
ರಾಜ್ಯದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ ವಿಚಾರಣೆ ಆಗಬೇಕು, ಅದನ್ನು ಬಿಟ್ಟು ಕಾನೂನನ್ನೇ ಕೈಗೆತ್ತಿಕೊಳ್ಳುವುದು ಸರಿಯಲ್ಲ. ಬಲವಂತವಾಗಿ ಮತಾಂತರ ಮಾಡುವುದು ತಪ್ಪು. ಕ್ರೈಸ್ತ ಚರ್ಚ್ ಗಳ ಮೇಲೆ ನಡೆದ ದಾಳಿಗಳ ಬಗ್ಗೆ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಸರ್ಕಾರ ಹೇಳುವುದು ತಪ್ಪು. 355ನೇ ವಿಧಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕಾರ್ನಾಡ್ ನಾನು ಸಂವಿಧಾನ ತಜ್ಞನಲ್ಲ ಎಂದರು.
(ದಟ್ಸ್ ಕನ್ನಡ ವಾರ್ತೆ)
ಭಜರಂಗದಳದ ರಾಜ್ಯ ಸಂಚಾಲಕರ ಬಂಧನ
ಮಂಗಳೂರು ಗಲಭೆ : ಸಿಓಡಿ ತನಿಖೆಗೆ ಅಸ್ತು
ಮಂಗಳೂರು ಗಲಭೆ ರಾಕ್ಷಸೀ ಕೃತ್ಯ : ಮೊಯ್ಲಿ












Click it and Unblock the Notifications