ಆಧುನಿಕ ಬೇಡರ ಕಣ್ಣಪ್ಪನಿಗೆ ಮಾಸಾಶನ
ಬಾದಾಮಿ, ಸೆ. 10 : ಭಕ್ತಿಯ ಉನ್ಮಾದದಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಿತ್ತುಕೊಂಡ ಆಧುನಿಕ ಬೇಡರ ಕಣ್ಣಪ್ಪ ಎಂದೇ ಚಿರಪರಿಚಿತನಾದ ಬಾದಾಮಿ ತಾಲೂಕಿನ ಅಡಗಲ್ ಗ್ರಾಮದ ಮುದುಕಪ್ಪ ಮಲ್ಲಾಡದ ಅವರಿಗೆ ಪ್ರತಿ ತಿಂಗಳು ಸಹಾಯದ ನೀಡಲು ತಾಲ್ಲೂಕು ಆಡಳಿತ ಮುಂದೆಬಂದಿದೆ. ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸೂಚನೆಯ ಮೇರೆಗೆ ತಾಲ್ಲೂಕು ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ.
ಬಿಜೆಪಿ ಸರ್ಕಾರದ 'ಶತದಿನ'ದ ಅಂಗವಾಗಿ ಮಂಗಳವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ ಅವರು ಭಕ್ತಿಯ ಪರಾಕಾಷ್ಠೆ ಮೆರೆದಿರುವ ಮುದುಕಪ್ಪನಿಗೆ ಪ್ರತಿ ತಿಂಗಳು 1000 ಸಾವಿರು ರುಪಾಯಿ ಮಾಶಾಸನವನ್ನು ನೀಡುವುದಾಗಿ ಘೋಷಣೆ ಮಾಡಿದರು.
ಮುದುಕಪ್ಪ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದಾನೆ. ಮುದುಕಪ್ಪ 'ಅಕ್ಯೂಟ್ ಸೈಕೋಸಿಸ್' ಎನ್ನುವ ರೋಗದಿಂದ ಬಳಲುತ್ತಿದ್ದಾನೆ. ಕಡಿಮೆ ಅವಧಿಯಲ್ಲಿ ಕಾಣುವ ಗಂಭೀರವಾದ ಮಾನಸಿಕ ರೋಗವಿದು. ರೋಗಿಯು ತನ್ನ ಮಾನಸಿಕ ಸಮತೋಲನವನ್ನು ಯಾವುದೋ ಕ್ಷಣದಲ್ಲಿ ಕಳೆದುಕೊಂಡು ಅಷ್ಟೇ ಶೀಘ್ರವಾಗಿ ಗುಣಮುಖನಾಗುವುದು ಈ ರೋಗದ ಲಕ್ಷಣ ಎಂದು ನಿಮ್ಹಾನ್ಸ್ ನ ಮನೋವೈದ್ಯ ಡಾ. ಚತುರ್ವೇದಿ ತಿಳಿಸಿದರು.
ಮುದುಕಪ್ಪ ಗುಣಮುಖರಾಗುತ್ತಿದ್ದು. ಊಟ, ನಿದ್ರೆ, ನಡವಳಿಕೆ, ಎಲ್ಲವೂ ಸಹಜವಾಗಿದೆ. ದಾಖಲಾದಾಗ ಇದ್ದ ಉದ್ವೇಗ ನಡವಳಿಕೆ ಈಗ ಕಡಿಮೆಯಾಗಿದೆ. ಅತಿಯಾಗಿ ಧಾರ್ಮಿಕನಾಗಿರುವ ಕಾರಣ ಹಾಡುವುದು, ಮಾತಾನಾಡುವುದು, ಮುಂದುವರೆದಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಸುದ್ದಿ:
ಎರಡು ಕಣ್ಣು ಕಳೆದುಕೊಂಡ ಮುದುಕಪ್ಪ ಯಲ್ಲಪ್ಪ












Click it and Unblock the Notifications