ಕರ್ಸ್ಟನ್ ವರ್ತನೆಗೆ ಬಿಸಿಸಿಐ ತೀವ್ರ ಆಕ್ಷೇಪ
ನವದೆಹಲಿ, ಸೆ. 4 : ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಗ್ಯಾರಿ ಕರ್ಸ್ಟನ್ ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿ ತಪರಾಕಿ ಹಾಕಿದೆ. ಮಹೇಂದ್ರ ಸಿಂಗ್ ಧೋನಿ ಕುರಿತಂತೆ ತರಬೇತುದಾರ ಗ್ಯಾರಿ ಕಿರ್ಸ್ಟನ್ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆ ಈಗ ಭಾರಿ ವಿವಾದ ಸೃಷ್ಟಿಸಿದೆ. ಕರ್ಸ್ಟನ್ ತರಬೇತುದಾರನ ಕೆಲ ಮಾತ್ರ ಮಾಡಬೇಕು. ಅನಗತ್ಯ ವಿಷಯದಲ್ಲಿ ತಲೆಹಾಕಬಾರದು ಎಂದು ಬಿಸಿಸಿಐ ಸೂಚಿಸಿದೆ.
ಇತ್ತೀಚೆಗೆ ತರಬೇತುದಾರ ಗ್ಯಾರಿ ಕರ್ಸ್ಟನ್ ಏಕದಿನ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಟೆಸ್ಟ್ ತಂಡಕ್ಕೂ ನಾಯಕರಾಗಲಿದ್ದಾರೆ ಎಂದು ಹೇಳಿಕೆ ನೀಡಿರುವುದು ಬಿಸಿಸಿಐ ಕಣ್ಣು ಕೆಂಪಗಾಗಿಸಿದೆ. ಮಾಧ್ಯಮಕ್ಕೆ ಹೇಳಿಕೆ ನೀಡುವುದನ್ನು ಬಿಟ್ಟು ತರಬೇತಿ ಕೆಲಸ ಮಾಡಿಕೊಂಡರೆ ಉತ್ತಮ ಎಂದು ಬಿಸಿಸಿಐ ಕಾರ್ಯದರ್ಶಿ ನಿರಂಜನ ಶಾ ಸೂಚನೆ ನೀಡಿದ್ದಾರೆ.
ಕರ್ಸ್ಟನ್ ಅವರನ್ನು ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಲೆಂದು ಆಯ್ಕೆ ಮಾಡಲಾಗಿದೆ. ಕ್ರಿಕೆಟ್ ತಂಡದ ಆಯ್ಕೆದಾರನನ್ನಾಗಿ ಆಯ್ಕೆ ಮಾಡಿಲ್ಲ. ಭಾರತೀಯ ಕ್ರಿಕೆಟ್ ತಂಡಕ್ಕೆ ಯಾರನ್ನು ನಾಯಕನನ್ನಾಗಿ ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ಕರ್ಸ್ಟನ್ ಅವರಿಗೆ ವಹಿಸಿರುವ ಕೆಲಸವನ್ನು ಸರಿಯಾಗಿ ನಿಭಾಯಿಸಲಿ ಎಂದು ನಿರಂಜನ ಶಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ಕ್ರೀಡಾವಾರ್ತೆ)