ಎರಡು ಕಣ್ಣು ಕಳೆದುಕೊಂಡ ಮುದುಕಪ್ಪ ಯಲ್ಲಪ್ಪ
ಬಾದಾಮಿ, ಸೆ. 2 : ಆಧುನಿಕ ಬೇಡರ ಕಣ್ಣಪ್ಪ ಎಂದೇ ಬಿರುದಾಂಕಿತನಾಗಿದ್ದ ಬಾಗಲಕೋಟೆ ಬಾದಾಮಿ ತಾಲೂಕಿನ ಮುದುಕಪ್ಪ ಕರಡಿ (55) ಸೋಮವಾರ ಮುಂಜಾನೆ ಇದ್ದ ಮತ್ತೊಂದು ಕಣ್ಣನ್ನು ದೇವರಿಗೆ ಸಮರ್ಪಿಸಿದ್ದಾನೆ. ಈತನ ಈ ದುಸ್ಥಿತಿಗೆ ಮಾನಸಿಕ ಅಸ್ವಸ್ಥೆತೆಯೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ತನ್ನ ಆರಾಧ್ಯ ದೈವ ಶಂಕ್ರಯ್ಯ ಅಜ್ಜನನ್ನು ಮೆಚ್ಚಿಸಲು ಕಳೆದ ಗುರುವಾರ(ಆ.28) ಬೆಳಗಿನ ಜಾವ ತನ್ನ ಕೈ ಹೆಬ್ಬೆರಳಿನಿಂದ ಬಲಗಣ್ಣು ಕಿತ್ತು ಗ್ರಾಮದ ದಿಗಂಬರೇಶ್ವರ ಮಠದಲ್ಲಿರುವ ಶಂಕ್ರಯ್ಯಜ್ಜನ ಗದ್ದುಗೆ ಮೇಲಿಟ್ಟಿದ್ದ. ಮೈಮೇಲೆ ದೇವರು ಬಂದಿದೆ ಎಂದು ತಿರುಗಾಡುತ್ತಿದ್ದ ಮುದುಕಪ್ಪ ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಒಬ್ಬಂಟಿಯಾಗಿ ಮಠಕ್ಕೆ ತೆರಳಿ ಕಣ್ಣು ಕಿತ್ತುಕೊಂಡ ನಂತರ ನೋವು ತಾಳಲಾರದೇ ಚೀರಾಡಿದಾಗ ಸುತ್ತಮುತ್ತಲಿನ ಜನರು ಹಾಗೂ ಕುಟುಂಬದವರು ಬಂದು ಈತನ ದುಸ್ಥಿತಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದರು. ಈ ಆಧುನಿಕ ಕಣ್ಣಪ್ಪನ ಗಾಢ ಭಕ್ತಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಹುಟ್ಟಿಸಿತ್ತು.
ಚಿಕೆತ್ಸೆಗಾಗಿ ಬಾದಾಮಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಮುದುಕಪ್ಪ ಮಂಗಳವಾರ ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೆ ದಿಗಂಬರೇಶ್ವರ ಮಠದ ಶಂಕ್ರಯ್ಯಜ್ಜನಿಗೆ ಇದ್ದ ಮತ್ತೊಂದು ಕಣ್ಣನ್ನು ಅರ್ಪಿಸಿದ್ದಾನೆ. ಮೌಢ್ಯತನದ ಪರಮಾವಧಿ ಮೂಲಕ ಮುದುಕಪ್ಪ ತನ್ನೆರಡು ಕಣ್ಣುಗಳನ್ನು ಕಳೆದುಕೊಂಡು ಸಂಪೂರ್ಣ ಕುರುಡನಾಗಿದ್ದಾನೆ. ಜನಜಾಗೃತಿಯ ಕೊರತೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.
(ದಟ್ಸ್ಕನ್ನಡ ವಾರ್ತೆ)
ಪೂರಕ ಸುದ್ದಿ
ಬಾಗಲಕೋಟೆಯಲ್ಲೊಬ್ಬ ಆಧುನಿಕ ಬೇಡರ ಕಣ್ಣಪ್ಪ












Click it and Unblock the Notifications