ಬಸ್ ದರ ಹೆಚ್ಚಳಕ್ಕೆ ಜಗ್ಗೇಶ್ ಸಮರ್ಥನೆ
ಬೆಂಗಳೂರು, ಆ. 29 : ಅನಿವಾರ್ಯ ಕಾರಣಗಳಿಂದ ಸಾರಿಗೆ ದರವನ್ನು ಏರಿಸಲಾಗಿದ್ದು, ಶ್ರೀಸಾಮಾನ್ಯರು ಚಿಕ್ಕ ಮಟ್ಟದ ಹೊರೆಯನ್ನು ಉದಾರ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಜಗ್ಗೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಇಂಧನ ಬೆಲೆ ಹೆಚ್ಚಳದಿಂದ ಸಂಸ್ಥೆಗೆ ಪ್ರತಿ ವರ್ಷ 50 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರದಲ್ಲಿ ಚಿಕ್ಕ ಏರಿಕೆ ಮಾಡಲಾಗಿದೆ. ಜನರು ಅನ್ಯತಾ ಭಾವಿಸದೆ ವಿಶಾಲ ಮನೋಭಾವದಿಂದ ಸ್ವೀಕರಿಸಬೇಕು ಎಂದರು.
ಕಳೆದ ಎರಡು ಮೂರು ಬಾರಿ ತೈಲೆ ಬೆಲೆ ಹೆಚ್ಚಳವಾಗಿದೆ. ಸರ್ಕಾರದ ಮುಂದೆ ಸಂಸ್ಥೆಯ ಅಧಿಕಾರಿಗಳು ದರ ಹೆಚ್ಚಿಸುವ ಕುರಿತು ಅನೇಕ ಮನವಿ ಮಾಡಿಕೊಂಡಿದ್ದರು. ಆದರೆ ಹಣದುಬ್ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಮತ್ತೊಂದು ಶಾಕ್ ನೀಡಬಾರದು ಎನ್ನುವ ದೃಷ್ಟಿಯಿಂದ ದರ ಹೆಚ್ಚಳದ ಪ್ರಕ್ರಿಯೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಲಾಯಿತು. ಅದರೆ ಇಂದು ದರ ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯ ಸಿಬ್ಬಂದಿಯ ತುಟ್ಟಿ ಭತ್ಯೆ, ಸಿಬ್ಬಂದಿ ವೇತನ ಹೆಚ್ಚಳದಿಂದ ವಾರ್ಷಿಕ 30 ಕೋಟಿ ರುಪಾಯಿ ಹೆಚ್ಚಿನ ಹೊರೆ, ವಿದ್ಯಾರ್ಥಿ ಪಾಸ್ ದರ ಈ ಸಲವೂ ಹೆಚ್ಚಳ ಮಾಡಿಲ್ಲ. ಇದರಿಂದ ಸಂಸ್ಥೆಗೆ ಇನ್ನಷ್ಟೂ ಹೊರೆ ಅನುಭವಿಸಲಿದೆ. ಹೊಸದಾಗಿ 900 ವಾಹನಗಳನ್ನು ಖರೀದಿಸಬೇಕಿದೆ. ವಾಹನ ಅಪಘಾತ ಸಂದರ್ಭದಲ್ಲಿ ವಿಮಾ ಯೋಜನೆ ಅನ್ವಯ ನೀಡಲಾಗುವ ಪರಿಹಾರ ಮೊತ್ತ 2 ಲಕ್ಷದಿಂದ 2.50 ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸಿ ದರ ಹೆಚ್ಚಳಕ್ಕೆ ಕ್ರಮಕ್ಕೆ ಮುಂದಾಗಿರುವುದಾಗಿ ಜಗ್ಗೇಶ್ ಹೇಳಿದರು. ಸಾರಿಗೆ ಸಂಸ್ಥೆ ಜನಸಾಮಾನ್ಯರ ಸಂಸ್ಥೆ ಅದನ್ನು ಉಳಿಸಿ ಬೆಳಸುವುದು ನಿಮ್ಮ ಜವಾಬ್ದಾರಿ. ಆದ್ದರಿಂದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಿಎಂಟಿಸಿ, ಕೆಎಸ್ ಆರ್ ಟಿಸಿಬಸ್ ದರದಲ್ಲಿ ಏರಿಕೆ












Click it and Unblock the Notifications