ಉಮೇಶ್ ಕತ್ತಿಗೆ ತೋಟಗಾರಿಕೆ ಖಾತೆ ಸಂಭವ
ಬೆಂಗಳೂರು, ಆ. 27 : ಜೆಡಿಎಸ್ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಉಮೇಶ್ ಕತ್ತಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟವನ್ನು ಸೇರಲಿದ್ದಾರೆ. ಇಂದು ಸಂಜೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಉಮೇಶ್ ಕತ್ತಿ ಅವರಿಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಮಾಣ ವಚನ ಬೋಧಿಸಲಿದ್ದಾರೆ.
ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಇಂದು ರಾತ್ರಿ ಅಮೆರಿಕದ ಶಿಕಾಗೋ ನಗರಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುಂಚೆ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದು, ಖಾತೆ ಹಂಚಿಕೆಯೂ ಇಂದೇ ನಡೆಯಲಿದೆ. ಕತ್ತಿ ಸೇರ್ಪಡೆಯ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆಳ್ಳುಬ್ಬಿ ಅವರು ವಹಿಸಿಕೊಂಡಿದ್ದ ತೋಟಗಾರಿಕೆ ಖಾತೆಯನ್ನು ಕತ್ತಿಯವರಿಗೆ ನೀಡಲಿದ್ದಾರೆ ಎನ್ನಲಾಗಿದೆ.
ಆಪರೇಶನ್ ಕಮಲಕ್ಕೆ ಎಲ್ಲ ಕಡೆಯಿಂದ ತೀವ್ರ ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಪಕ್ಷಾಂತರವನ್ನು ಕೆಲ ಕಾಲ ಸ್ಥಗಿತಗೊಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಬೆಳ್ಳುಬ್ಬಿ ರಾಜೀನಾಮೆ ಪಡೆದು ಕತ್ತಿ ಅವರನ್ನು ಸಂಪುಟಕ್ಕೆ ಸೇರ್ಪಡೆಯ ವಿಷಯದಲ್ಲಿ ಸಾಕಷ್ಟು ಮುಜುಗರ ಅನುಭಿಸಿರುವ ಮುಖ್ಯಮಂತ್ರಿಯವರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗುವ ನಾಯಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗುವುದು. ಇನ್ನು ಮುಂದೆ ಯಾವುದೇ ಸಚಿವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications