ನ್ಯಾನೋ ಕಾರು ಘಟಕ ಸ್ಥಾಪನೆಗೆ ಕರ್ನಾಟಕದ ಆಹ್ವಾನ
ಬೆಂಗಳೂರು, ಆ.27: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪನಿ ಸ್ಥಾಪಿಸಲಿರುವ ನ್ಯಾನೋ ಕಾರು ತಯಾರಿಕಾ ಘಟಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅದನ್ನು ಧಾರವಾಡ ಬಳಿ ಸ್ಥಾಪಿಸುವಂತೆ ಕರ್ನಾಟಕ ಸರ್ಕಾರ ಟಾಟಾ ಕಂಪನಿಯನ್ನು ಆಹ್ವಾನಿಸಿದೆ.
ಬುಧವಾರ ಸಚಿವ ಸಂಪುಟದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ, ತಮ್ಮ ಹೊಸ ಯೋಜನೆಯನ್ನು ಕರ್ನಾಟಕದಲ್ಲಿ ಸ್ಥಾಪಿಸುವಂತೆ ಟಾಟಾ ಗ್ರೂಪ್ನ ಅಧ್ಯಕ್ಷ ರತನ್ ಟಾಟಾ ಅವರನ್ನು ಆಹ್ವಾನಿಸಲಾಗಿದೆ ಎಂದರು.
ಈಗಾಗಲೇ ಧಾರವಾಡದಲ್ಲಿ 900 ಎಕರೆ ಪ್ರದೇಶದಲ್ಲಿ ಟಾಟಾ ಗ್ರೂಪ್ನ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಿಂಗೂರಿನಲ್ಲಿ ನ್ಯಾನೋ ಕಾರು ಘಟಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಟಾಟಾ ಗ್ರೂಪ್ ತನ್ನ ಹೊಸ ಯೋಜನೆಯನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸಲು ಉದ್ದೇಶಿಸಿದ್ದರೆ ಧಾರವಾಡದಲ್ಲಿ ಮತ್ತಷ್ಟು ಭೂಮಿ ಕೊಡಲು ನಾವು ಸಿದ್ಧರಿದ್ದೇವೆ ಎಂದರು. ನ್ಯಾನೋ ಸಣ್ಣ್ಣ ಕಾರು ಉತ್ಪಾದನಾ ಘಟಕವನ್ನು ತಮ್ಮ ರಾಜ್ಯಗಳಲ್ಲಿ ಸ್ಥಾಪಿಸುವಂತೆ ಆಹ್ವಾನಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಐದನೆಯದು.
ಛತ್ತೀಸ್ಗಡದೊಂದಿಗೆ ಒಪ್ಪಂದ
5000 ಕೋಟಿ ರು.ಗಳ ವೆಚ್ಚದಲ್ಲಿ ಶಾಖೋತ್ಪನ್ನ ವಿದ್ಯುತ್ ಘಟಕನ್ನು ಸ್ಥಾಪಿಸಲು ಛತ್ತೀಸ್ಗಡ ರಾಜ್ಯದೊಂದಿಗಿನ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಛತ್ತೀಸ್ಗಡದ ರಾಯ್ಪುರ ಬಳಿ ಸ್ಥಾಪಿಸಲಿರುವ 1000 ಮೆಗಾವ್ಯಾಟ್ ಯೋಜನೆಯ ಒಪ್ಪಂದಕ್ಕೆ ಮುಂದಿನ ಎರಡು ತಿಂಗಳಲ್ಲಿ ಸಹಿ ಮಾಡಲಾಗುತ್ತದೆ. ಇದಕ್ಕಾಗಿ ಛತ್ತೀಸ್ಗಡ ಸರ್ಕಾರ 1200 ಎಕರೆ ಪ್ರದೇಶವನ್ನು ಕೊಡುತ್ತಿದ್ದು ಮಹಾನದಿಯಿಂದ ನೀರನ್ನು ಸರಬರಾಜು ಮಾಡಲಿದೆ. ಉತ್ಪಾದನೆಯಾಗುವ ವಿದ್ಯುತ್ತಿನಲ್ಲಿ ಶೇ.30ರಷ್ಟನ್ನು ಛತ್ತೀಸ್ಗಡ ರಾಜ್ಯಕ್ಕೆ ನೀಡಲಾಗುತ್ತದೆ ಎಂದು ಕರಂದ್ಲಾಜೆ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)
ಸಿಂಗೂರಿನ ಭೂಮಿ ಮತ್ತೆ ರೈತರಿಗೆ ಧಕ್ಕದು: ಪ. ಬಂಗಾಳ
ಕನಸಿನ ನ್ಯಾನೋ ಕಾರೂ ಇನ್ನು ಗಗನ ಕುಸುಮ












Click it and Unblock the Notifications