ಗೋಕರ್ಣ ಮುಗಿಯಿತು ಈಗ ಸಿದ್ಧಲಿಂಗೇಶ್ವರನ ಸರದಿ
ಕುಣಿಗಲ್, ಆ. 27 : ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ವಿವಾದ ನಡೆಯುತ್ತಿರುವ ಬೆನ್ನಲ್ಲೇ ಶ್ರೀಕ್ಷೇತ್ರ ಯಡಿಯೂರು ಸಿದ್ಧಲಿಂಗೇಶ್ವರ ಮಠದ ಹಸ್ತಾಂತರ ವಿವಾದ ಸ್ಪೋಟಗೊಂಡಿದೆ. ಯಡಿಯೂರು ಶ್ರೀಕ್ಷೇತ್ರವನ್ನು ಡಂಬಳದ ತೋಂಟದಾರ್ಯ ಮಠದ ವಶಕ್ಕೆ ನೀಡುವ ಸರ್ಕಾರದ ಪ್ರಕ್ರಿಯೆಯನ್ನು ವಿರೋಧಿಸಿ ದೇವಸ್ಥಾನದ ಆವರಣದಲ್ಲಿ ವಿವಿಧ ಮಠಾಧಿಪತಿಗಳು, ಅರ್ಚಕರು, ಆಗಮಿಕರು, ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಹಾಗೂ ವೀರಶೈವ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರಮಠಕ್ಕೆ ಹಸ್ತಾಂತರ ಪ್ರಕರಣ ಆ ಭಾಗದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದೇ ಮಾದರಿಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಎಡವಟ್ಟುತನ ಪ್ರದರ್ಶಿಸಿದ್ದು, ದೇವಾಲಯವನ್ನು ಹಸ್ತಾಂತರ ಮಾಡುವಂತೆ ಗದುಗಿನ ಡಂಬಳ ಮಠದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಸರ್ಕಾರದ ಮಟ್ಟದಲ್ಲಿ ಕಾರ್ಯಚರಣೆಗೆ ಇಳಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ವ್ಯಕ್ತವಾಗಿದೆ.
ಹಸ್ತಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ಮುಖಂಡರು ಹಾಗೂ ಮಠಾಧಿಪತಿಗಳು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಪ್ರತಿಭಟನಾ ಸಭೆ ನಡೆಸಿ ದೇವಸ್ಥಾನದ ಆಡಳಿತವನ್ನು ಯಥಾಸ್ಥಿತಿಯಲ್ಲಿ ನಡೆಸಬೇಕು. ಒಂದು ಪಕ್ಷ ಸರ್ಕಾರ ಹಸ್ತಾಂತರಕ್ಕೆ ಮುಂದಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ ಮತ್ತು ಡಂಬಳ ಸ್ವಾಮೀಜಿ ಕಾರಣರಾಗುತ್ತಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 40 ಸಾವಿರ ಮುಜರಾಯಿ ದೇವಸ್ಥಾನಗಳಿವೆ. ಇವುಗಳಿಂದ ವಾರ್ಷಿಕ 100 ಕೋಟಿ ರುಪಾಯಿ ಆದಾಯ ಸರ್ಕಾರದ ಬೊಕ್ಕಸ ಸೇರುತ್ತದೆ. ಆದರೆ ದೇವಸ್ಥಾನಗಳಿಂದ ಲಾಭ ಪಡೆಯುವ ಸರ್ಕಾರ ಅದರ ಅಭಿವೃದ್ಧಿಯತ್ತ ಗಮನ ಹರಿಸುವುದಿಲ್ಲ ಎಂದು ಕೊಳದ ಮಠದ ಶಾಂತವೀರ ಶ್ರೀಗಳು ಆರೋಪಿಸಿದರು. ಡಂಬಳ ಶ್ರೀಗಳು ಯಡಿಯೂರು ದೇವಸ್ಥಾನದಿಂದ ಸಾಕಷ್ಟು ಆದಾಯ ಬರುತ್ತಿರುವ ಹಿನ್ನೆಲೆಯಲ್ಲಿ ಹಣದ ಆಸೆಯಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ರಾಜಕೀಯ ಮುಖಂಡರು ಮಣಿಯಬಾರದು. ಜಾತ್ಯಾತೀತ ಮನೋಭಾವದ ಸಿದ್ಧಲಿಂಗೇಶ್ವರ ದೇವಾಲಯವನ್ನು ಯಾವುದೇ ಕಾರಣಕ್ಕೂ ಹಸ್ತಾಂತರ ಮಾಡಲು ಬಿಡುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಶಾಸಕ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ಯಡಿಯೂರಪ್ಪ ಅವರ ಮನೆದೇವರಾದ ಸಿದ್ಧಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸುಮಾರು 40 ಕೋಟಿ ರುಪಾಯಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇನ್ನೊಂದೆಡೆ ದೇವಾಲಯದ ಆಡಳಿತವನ್ನು ಡಂಬಳ ಮಠಕ್ಕೆ ವಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಯಾವ ಕಾರಣಕ್ಕೂ ಹಸ್ತಾಂತರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಬಲವಂತವಾಗಿ ಹಸ್ತಾಂತರಕ್ಕೆ ಮುಂದಾದರೆ ಹೋರಾಟ ಹಾಗೂ ಸಂಘರ್ಷದ ಹಾದಿ ತುಳಿಯಬೇಕಾಗುತ್ತದೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications