'ಅಕ್ಕ' ಸಮ್ಮೇಳನಕ್ಕೂ ಮುಂಚೆ ಸಂಪುಟ ಪುನಾರಚನೆ!
ಬೆಂಗಳೂರು, ಆ. 23 : ಶಿಕಾಗೋದಲ್ಲಿ ನಡೆಯಲಿರುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನಿಯೋಗ ತೆರಳುವ ಮೊದಲೇ ಸಚಿವ ಸಂಪುಟ ಪುನಾರಚನೆಯಾಗಲಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸುಳಿವು ನೀಡಿದ್ದಾರೆ.
ವಿವಾದಾತ್ಮಕ ಅಮೆರಿಕ ಪ್ರವಾಸ ಏರಿಸಿರುವ ಬಿಸಿ ತಣ್ಣಗಾಗುವ ಮೊದಲೇ ಸಂಪುಟ ಪುನಾರಚನೆಯ ಸುದ್ದಿ ರಾಜಕೀಯ ವಲಯಗಳಲ್ಲಿ ಮತ್ತು ಬಿಜೆಪಿ ಅಂಗಳದಲ್ಲಿ ಮತ್ತಷ್ಟು ಕಾವೇರಿಸಲಿದೆ. ಪುನಾರಚನೆಯಲ್ಲಿ ಭಾನುವಾರ ರಾಜೀನಾಮೆ ನೀಡುತ್ತಿರುವ ಬೆಳ್ಳುಬ್ಬಿಯವರ ಜೊತೆ ಇನ್ನೂ ಕೆಲವರ ತಲೆದಂಡವಾಗಲಿರುವುದು ಖಚಿತವಾಗಿರುವುದು ಜೇನಿನ ಗೂಡಿಗೆ ಕಲ್ಲು ಎಸೆದಂತಾಗಿದೆ.
ಬಿಜಾಪುರ ಜಿಲ್ಲೆಯಾದ್ಯಂತ ಬೆಳ್ಳುಬ್ಬಿ ತಲೆದಂಡದ ವಿರುದ್ಧ ಅಕ್ರೋಶ ಭುಗಿಲೆದ್ದಿದ್ದರೂ ಅವರು ಭಾನುವಾರ ರಾಜೀನಾಮೆ ನೀಡುವುದು ಖಚಿತವಾಗಿದೆ. ಯಡಿಯೂರಪ್ಪ ಅವರು ಬೆಳ್ಳುಬ್ಬಿ ಅವರ ಮನವೊಲಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಶಿವಮೊಗ್ಗ ಪ್ರವಾಸದಲ್ಲಿರುವುದರಿಂದ ಬೆಳ್ಳುಬ್ಬಿ ನಾಳೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಇನ್ನಿಬ್ಬರ ಸೇರ್ಪಡೆ, ಇನ್ನಿಬ್ಬರ ತಲೆದಂಡ : ಕಾಂಗ್ರೆಸ್ ನ ಸೋಮಣ್ಣ ಮತ್ತು ನಾಗಮಾರಪಲ್ಲಿಯವರೂ ಕೂಡ ಬಿಜೆಪಿ ಪಾಳಯಕ್ಕೆ ಹೊಸದಾಗಿ ಸೇರ್ಪಡೆಯಾಗುವ ಕುರಿತು ಖಚಿತ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ವಲಸಿಗರಿಗೆ ಪಕ್ಷದ ಇನ್ನಿಬ್ಬರು ಸಚಿವರು ಹಾದಿ ಮಾಡಿಕೊಡುವುದು ಅನಿವಾರ್ಯವಾಗಿದೆ. ಕೃಷ್ಣಯ್ಯ ಶೆಟ್ಟಿ ಮತ್ತು ಹಾಲಪ್ಪನವರ ಹೆಸರುಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ವದಂತಿ ಹಬ್ಬಿದೆ.
ಅಸ್ಥಿರಕ್ಕೆ ಯತ್ನ : 'ಆಪರೇಷನ್ ಕಮಲ'ದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಬಿಜೆಪಿ ಪಕ್ಷದಲ್ಲಿ ಅಸ್ಥಿರತೆಯನ್ನು ತರಲು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಸದಾನಂದ ಗೌಡ ಆರೋಪಿಸಿದ್ದಾರೆ. ಯಾರು ಏನೇ ಹೇಳಿದರೂ ಬಿಜೆಪಿಯನ್ನು ಅಸ್ಥಿರಗೊಳಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ಯಡಿಯೂರಪ್ಪ
ಮುಂದೆ,
ಶೋಭಾ
ಕರಂದ್ಲಾಜೆ
ಹಿಂದೆ!
ಯಡಿಯೂರಪ್ಪ
ಅಮೆರಿಕ
ಪ್ರವಾಸ
ಖಚಿತ
ಯಡಿಯೂರಪ್ಪ
ಅಮೆರಿಕಾ
ಪ್ರವಾಸ
ದಿನಚರಿ
'ಅಕ್ಕ'
ವಿಶ್ವ
ಕನ್ನಡ
ಸಮ್ಮೇಳನ