ಪಾಕಿಸ್ತಾನ : ನ್ಯಾಯಧೀಶರ ಮರುನೇಮಕಕ್ಕೆ ಅಸ್ತು
ಇಸ್ಲಾಮಾಬಾದ್, ಆ. 22 : ಮಹತ್ವದ ಬೆಳವಣಿಗೆಯೊಂದರಲ್ಲಿ ಅಮಾನತುಗೊಂಡಿರುವ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳಲು ಆಡಳಿತರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಿರ್ಧರಿಸಿದೆ. ಈ ಕುರಿತು ಪ್ರಧಾನಮಂತ್ರಿ ಸಚಿವಾಲಯದಿಂದ ಅಧಿಕೃತ ಸೂಚನೆ ಹೊರಬಿದ್ದರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉಂಟಾಗಿದ್ದ ಕಾರ್ಮೋಡ ನಿಧಾನವಾಗಿ ಕರಗತೊಡಗಿದೆ.
ಪಾಕಿಸ್ತಾನದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ ಮುಖಂಡ ಹಾಗೂ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ 24 ಗಂಟೆಗಳ ಗಡುವು ನೀಡಿದ್ದರು. ಅಮಾನತುಗೊಂಡಿರುವ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳದಿದ್ದಲ್ಲಿ ಸರ್ಕಾರದಿಂದ ಹೊರಹೋಗುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಯಾಸೆಫ್ ರಜಾ ಗಿಲಾನಿ ಹಾಗೂ ಪಿಪಿಪಿ ಪಕ್ಷ ಅಧ್ಯಕ್ಷ ಆಸೀಫ್ ಜರ್ದಾರಿ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ನವಾಜ್ ಷರೀಫ್, ಸರ್ಕಾರ ಉತ್ತಮ ನಿರ್ಧಾರವನ್ನು ಕೈಗೊಂಡಿದೆ. ಪ್ರಜಾಪ್ರಭುತ್ವ ಆಡಳಿತದಲ್ಲಿರುವ ದೇಶದಲ್ಲಿ ನ್ಯಾಯಾಲಯ, ನ್ಯಾಯಾಧೀಶರ ಪಾತ್ರ ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳಲು ನಿರ್ಧರಿಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಆದರೆ ಪಿಪಿಪಿ ಮುಖಂಡ ಆಸೀಫ್ ಅಲಿ ಜರ್ದಾರಿ ಅವರಿಗೆ ನ್ಯಾಯಾಧೀಶ ಮರುನೇಮಕ ಮಾಡಿಕೊಳ್ಳುವುದು ಇಷ್ಟವಿಲ್ಲ. ಸರ್ಕಾರ ಅಭದ್ದವಾಗಬಾರದು ಎನ್ನುವ ದೃಷ್ಟಿಯಿಂದ ಅನಿವಾರ್ಯವಾಗಿ ನೇಮಕಕ್ಕೆ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ರಾಜೀನಾಮೆ ನೀಡಿದ 24 ಗಂಟೆಗಳಲ್ಲಿ ಅಮಾನತುಗೊಂಡಿರುವ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರದ ಕಿಂಗ್ ಮೇಕರ್ ಹಾಗೂ ಪಿಪಿಪಿ ಪಕ್ಷದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಭರವಸೆ ನೀಡಿದ್ದರು. ಆದರೆ ಮುಷರಫ್ ರಾಜೀನಾಮೆ ನೀಡಿ ನಾಲ್ಕು ದಿನಗಳು ಕಳೆದರೂ ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ ಎನ್ನುವುದು ನವಾಜ್ ಷರೀಫ್ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಜರ್ದಾರಿ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಮಸ್ಯೆ ಮತ್ತಷ್ಟು ಜಟಿಲವಾಗಿತ್ತು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಅಧ್ಯಕ್ಷ ಮುಷರಫ್ ಸುಪ್ರಿಂಕೋರ್ಟ್ ನ್ಯಾಯಾಧೀಶ ಇಫ್ತೀಕರ್ ಚೌಧರಿ ಸೇರಿದಂತೆ ಎಲ್ಲಾ ನ್ಯಾಯಾಧೀಶರನ್ನು ಅಮಾನತುಗೊಳಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications