ಗೋವಾದಲ್ಲಿ ಬೆಂಬಲಿಗರ ಜತೆ ಸಿದ್ದು ರಹಸ್ಯ ಸಭೆ
ಬೆಂಗಳೂರು, ಆ. 20 : ಕಾಂಗ್ರೆಸ್ ಪಕ್ಷದಲ್ಲಿ ಮೂಲುಗುಂಪಾಗಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಬೆಂಬಲಿಗರು ಗೋವಾದ ರೆಸಾರ್ಟ್ ವೊಂದರಲ್ಲಿ ರಹಸ್ಯ ಸಭೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಸಿದ್ಧರಾಮಯ್ಯ ಅವರು ಎಬಿಪಿಜೆಡಿ ಪಕ್ಷವನ್ನು ಬಲಗೊಳಿಸುವುದು ಸೇರಿದಂತೆ ವಿವಿಧ ಪಕ್ಷದಲ್ಲಿರುವ ಸಿದ್ಧರಾಮಯ್ಯ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದಲ್ಲಿರುವ ಆತೃಪ್ತಿ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಆಡಳಿತರೂಢ ಬಿಜೆಪಿ ಸರ್ಕಾರದ ಬುಡಕ್ಕೆ ನೀರು ಬಿಡುವ ಕಾರ್ಯತಂತ್ರವನ್ನು ಹೆಣಿಯುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಗೋವಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಕಡೂರು ಕೃಷ್ಣಮೂರ್ತಿ, ಮಾಜಿ ಸಂಸದ ಕೋದಂಡರಾಮಯ್ಯ, ಮಾಜಿ ಸಚಿವರಾದ ಬಿ.ಆರ್.ಪಾಟೀಲ್, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹಾದೇವಪ್ಪ, ಮಹದೇವ ಪ್ರಸಾದ ಸೇರಿ ಹಲವು ಸಿದ್ಧರಾಮಯ್ಯ ಬೆಂಬಲಿಗರ ಗೋವಾ ರೇಸಾರ್ಟ್ ವೊಂದರಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷ ವರಿಷ್ಠರ ಇತ್ತೀಚಿನ ಕೆಲ ನಿರ್ಧಾರಗಳು ಕುರಿತು ಚರ್ಚೆ ನಡೆಸಲಾಗಿದೆ. ಹಾಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಪೂರ್ವದಲ್ಲಿ ವರಿಷ್ಠರು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತೊರೆದು ಸಿದ್ಧರಾಮಯ್ಯ ಅವರು ಸ್ಪಾಪಿಸಿರುವ ಎಬಿಪಿಜೆಡಿ ಪಕ್ಷವನ್ನೇ ಬಲಗೊಳಿಸಬೇಕು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿರುವ ಸಿದ್ಧರಾಮಯ್ಯ ಬೆಂಬಲಿಗರನ್ನು ಎಬಿಪಿಜೆಡಿಗೆ ಸೆಳೆದುಕೊಳ್ಳುವುದು. ಆ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಲವಾದ ಟಾಂಗ್ ಕೊಡುವ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಯಿತು. ಇನ್ನೊಂದು ಮೂಲಗಳ ಪ್ರಕಾರ ಎಬಿಪಿಜೆಡಿ ಬಲಗೊಳಿಸಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ ಇದೆಲ್ಲಾ ಸುಳ್ಳು ಕಟ್ಟುಕತೆ. ಮಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿವೆ. ಕಾರ್ಯಕ್ರಮವೊಂದರ ನಿಮಿತ್ತ ಗೋವಾಕ್ಕೆ ಆಗಮಿಸಿರುವುದಾಗಿ ಹೇಳಿದ್ದಾರೆ. ಏನೇ ಆದರೂ ಪ್ರಸ್ತುತ ರಾಜಕೀಯದಲ್ಲಿ ಸಿದ್ಧರಾಮಯ್ಯ ಅವರ ರಾಜಕೀಯ ಜೀವನ ಅಕ್ಷರಶಃ ಅತಂತ್ರವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications