ಪಕ್ಕದ ರಾಜ್ಯಗಳು ಸಹೋದರನ ಸಮಾನ : ಯಡಿಯೂರಪ್ಪ
ಚೆನ್ನೈ, ಆ. 20 : ಹೊಗೇನಕಲ್ ವಿವಾದವನ್ನು ಕೊನೆಗಾಣಿಸಲು ಪ್ರಧಾನಮಂತ್ರಿ ನೇತೃತ್ವದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾತುಕತೆ ನಡೆಸಿ ಸೌಹಾರ್ಧಯುತವಾಗಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.
ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ವೀಸಾ ಪಡೆಯುವ ನಿಮಿತ್ತ ನಗರಕ್ಕೆ ಆಗಮಿಸಿದ್ದರು. ಈಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಕ ರಾಜ್ಯಗಳು ಸಹೋದರ ಸಮಾನ. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಕರ್ನಾಟಕ ಬಯಸುತ್ತದೆ ಎಂದರು. ಹೊಗೇನಕಲ್ ಜಲಾಶಯ ಅನೇಕ ವರ್ಷಗಳಿಂದ ಸಮಸ್ಯೆ ಸಮಸ್ಯೆಯಾಗಿ ಉಳಿದಿದೆ. ತಮಿಳುನಾಡು ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಪರಸ್ಪರ ಕಚ್ಚಾಡತೊಡಗಿವೆ. ಉಭಯ ರಾಜ್ಯಗಳಲ್ಲಿ ವೈಮನಸ್ಸು ಕೂಡಾ ಉಂಟಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿ ಬಂದು ತಲುಪಿದರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿರುವ ಕೇಂದ್ರ ಸರ್ಕಾರ ಮೈ ಮರೆತು ಕುಳಿತಿದೆ ಎಂದು ಆರೋಪಿಸಿದರು.
ಹೊಗೇನಕಲ್ ವಿವಾದಕ್ಕೆ ಶಾಶ್ವತ ಪರಿಹಾರ ಬೇಕಾಗಿದೆ ಎಂದ ಯಡಿಯೂರಪ್ಪ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿ ಮಟ್ಟದ ಸಭೆ ಕರೆಯಬೇಕು. ವಿವಾವದ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಬೇಕಾಗಿದೆ. ಪ್ರಧಾನಮಂತ್ರಿಯವರು ಈ ಬಗ್ಗೆ ನ್ಯಾಯಯುತವಾದ ಸಲಹೆ ಸೂಚನೆಗಳನ್ನು ನೀಡಬೇಕಾಗಿದೆ. ಆಂದಾಗ ಮಾತ್ರ ಇದಕ್ಕೆ ಪರಿಹಾರ ದೊರೆಯಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಯಡಿಯೂರಪ್ಪ ಅಮೆರಿಕ ಪ್ರವಾಸ ಖಚಿತ
'ಹೊಗೆ' ಜಂಟಿ ಸಮೀಕ್ಷೆಗೆ ಯಡಿಯೂರಪ್ಪ ಆಗ್ರಹ












Click it and Unblock the Notifications