ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ 'ಹೊಗೆ' ವಿವಾದ
ಬೆಂಗಳೂರು, ಆ.20: ಹೊಗೇನಕಲ್ ಯೋಜನೆ ಬಗೆಗೆ ಇರುವ ವಿವಾದವನ್ನು ತಮಿಳುನಾಡು ಸರ್ಕಾರ ಪರಿಹರಿಸಲು ವಿಫಲವಾಗಿರುವ ಕಾರಣ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಕರ್ನಾಟಕ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಬುಧವಾರ ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಅವರು, ಆಡಳಿತಾತ್ಮಕವಾಗಿ ಹಾಗೂ ರಾಜಕೀಯವಾಗಿ ಹೊಗೇನಕಲ್ ವಿವಾದದಲ್ಲಿ ಸೋತರೆ ನಮಗೆ ಉಳಿದಿರುವ ಕೊನೆಯ ಆಯ್ಕೆ ಸುಪ್ರೀಂ ಕೋರ್ಟ್. ಪ್ರಜಾಪ್ರಭುತ್ವ ಮತ್ತು ರಾಜ್ಯಾಡಳಿತ ವ್ಯವಸ್ಥೆಯಲ್ಲಿ ಕೊನೆಯ ಆಯ್ಕೆಯಾಗಿ ನಾವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.
ವಿವಾದಿತ ಪ್ರದೇಶದಲ್ಲಿ ಎರಡು ರಾಜ್ಯಗಳು ಜಂಟಿ ಸಮೀಕ್ಷೆ ನಡೆಸಲು ತಮಿಳುನಾಡು ಸರ್ಕಾರ ಅವಕಾಶ ಕಲ್ಪಿಸಬೇಕು ಹಾಗೂ ಈ ಹೊಸ ಯೋಜನೆಯ ನೀರು ಹಂಚಿಕೆ ಬಗೆಗಿನ ವಿವರಗಳನ್ನು ನೀಡಬೇಕು.ಈ ವಿಚಾರದಲ್ಲಿ ತಮಿಳುನಾಡಿಗೆ ನಾವು ಒಂದು ವಾರ ಕಾಲ ಗಡುವು ನೀಡುತ್ತಿದ್ದೇವೆ. ತಮಿಳುನಾಡು ಸರ್ಕಾರ ಸಹಕರಿಸದಿದ್ದರೆ ಮುಂದಿನ ತಿಂಗಳು ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿಗೆ ಕೊಂಡೊಯ್ಯಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.
ಹೊಗೇನಕಲ್ ಪ್ರಾಂತ್ಯದಲ್ಲಿ ಎರಡು ರಾಜ್ಯಗಳು ಜಂಟಿ ಸಮೀಕ್ಷೆ ಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಮಿಳುನಾಡು ನೀರಾವರಿ ಸಚಿವ ದೊರೈ ಮುರುಗನ್ ಕೊಟ್ಟಿರುವ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಮಾತ್ರ ಸ್ಪಷ್ಟವಾಗಿದ್ದು,ಎರಡು ರಾಜ್ಯಗಳು ಜಂಟಿ ಸಮೀಕ್ಷೆ ಕೈಗೊಳ್ಳುವ ತನಕ ಯೋಜನೆಯನ್ನು ಮುಂದುವರಿಸಲು ಬಿಡುವುದಿಲ್ಲ ಎಂದರು.
ಈ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಬಳಿ ಇಂದು ಸಂಜೆ ಮಾತುಕತೆ ನಡೆಸಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)
ಪಕ್ಕದ ರಾಜ್ಯಗಳು ಸಹೋದರನ ಸಮಾನ : ಯಡಿಯೂರಪ್ಪ












Click it and Unblock the Notifications