ಎರಡನೇ ಏಕದಿನ ಪಂದ್ಯ ಭಾರತಕ್ಕೆ 3 ವಿಕೆಟ್ ಗಳ ಜಯ
ಡಂಬುಲಾ, ಆ. 20 : ಇಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿಥೇಯ ಶೀಲಂಕಾ ತಂಡವನ್ನು ಬಗ್ಗು ಬಡಿದ ಪ್ರವಾಸಿ ಭಾರತ ತಂಡ ಮೂರು ವಿಕೆಟ್ ಗಳಿಂದ ಸುಲಭ ಜಯ ದಾಖಲಿಸಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಹೊರಬಂದು ಸರಣಿಯನ್ನು 1-1 ಸಮ ಮಾಡಿಕೊಳ್ಳುವುದರೊಂದಿಗೆ ಸೇಡು ತೀರಿಸಿಕೊಂಡಿತು.
ಟಾಸ್ ಸೋಲುವ ಮೂಲಕ ಬ್ಯಾಟಿಂಗ್ ಆಯ್ದುಕೊಂದು ಅತಿಥೇಯ ಲಂಕನ್ನರು ಭಾರತದ ದಾಳಿಗೆ ತತ್ತರಿಸಿದರು. ವೇಗಿಗಳಾದ ಜಹೀರ್ ಖಾನ್, ಪ್ರವೀಣ್ ಕುಮಾರ್ ಮತ್ತು ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಕರಾರುವಕ್ಕಾದ ದಾಳಿಗೆ ಕಕ್ಕಾಬಿಕ್ಕಿಯಾದ ಲಂಕಾದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಹರಸಾಹಸಪಟ್ಟಿತು. ಲಂಕಾದ ಪ್ರಮುಖ ಬ್ಯಾಟುಗಾರರು ಭಾರತೀಯರ ದಾಳಿಗೆ ಹೆಚ್ಚು ಹೊತ್ತು ಕ್ರಿಸ್ ಬಳಿ ನಿಲ್ಲಲು ಸಾಧ್ಯವಾಗಲಿಲ್ಲ. ಜಯಸೂರ್ಯ, ಜಯವರ್ಧನೆ, ಸಂಗಕ್ಕಾರ ಸೇರಿದಂತೆ ಘಟಾನುಘಟಿಗಳು ಬೇಗನೆ ಪೆವಿಲಿಯನ್ ದಾರಿ ಹಿಡಿದರು. ಪರಿಣಾಮವಾಗಿ 39.4 ಓವರ್ ಗಳಲ್ಲಿ ಅತಿಥೇಯ ಲಂಕಾಪಡೆ ಕೇವಲ 142 ರನ್ ಗಳಿಸಿ ಅಲೌಟ್ ಆಯಿತು. ಭಾರತದ ಪರ ಜಹೀರ್ ಖಾನ್ ನಾಲ್ಕು, ಪ್ರವೀಣಕುಮಾರ ಮೂರು ಮತ್ತು ಹರ್ಭಜನ್ ಸಿಂಗ್ ಎರಡು ವಿಕೆಟ್ ಪಡೆದರು.
ಲಂಕನ್ನರ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತೀಯ ಬ್ಯಾಟಿಂಗ್ ಆರಂಭದಲ್ಲಿ ಮತ್ತೆ ಮುಗ್ಗರಿಸಿತು. ಕೇವಲ 142 ರನ್ ಗಳ ಸಣ್ಣ ಮೊತ್ತದ ಗುರಿಯನ್ನು ಬೆನ್ನತ್ತಿದ ಆರಂಭಿಕ ಆಟಗಾರ ಇರ್ಪಾನ್ ಪಠಾಣ್ ಲಂಕನ್ನರಿಗೆ ಬೇಗನೆ ವಿಕೆಟ್ ಒಪ್ಪಿಸಿದರು. ಇದರಿಂದ ಭಾರತೀಯ ಪಾಳೆಯದಲ್ಲಿ ಮತ್ತೆ ನಿರಾಶೆ ಕಾರ್ಮೋಡ ಆರಂಭವಾಯಿತು. ಮತ್ತೊಂದು ಕಡೆ ವಿರಾಟ್ ಕೊಹ್ಲಿ ಭಾರತದ ಮೊತ್ತ ನಿಧಾನಗತಿಯಲ್ಲಿ ಏರಿಸಲು ಆರಂಭಿಸಿದರು. ವಿರಾಟ್ ಕೊಹ್ಲಿ 37 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿ ಹೊರ ನಡೆದರು. ಯುವರಾಜ್ 20, ನಾಯಕ ಮಹೇಂದ್ರ ಸಿಂಗ್ ಧೋನಿ 39 ರನ್ ಕಲೆ ಹಾಕುವ ಮೂಲಕ ಭಾರತವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದರು. ಕೊನೆಯದಾಗಿ ಬದರಿನಾಥ್ ಮತ್ತು ಜಹೀರ್ ಖಾನ್ ಅವರ ಗೆಲುವಿನ ರನ್ ಗಳಿಸುವ ಮೂಲಕ ಸರಣಿ ಸಮ ಮಾಡಿಕೊಂಡರು. 38.4 ಓವರ್ ಗಳಲ್ಲಿ ಭಾರತ ಗುರಿಯನ್ನು ಮುಟ್ಟಿ ವಿಜಯಮಾಲೆ ಧರಿಸಿತು. ನಿರೀಕ್ಷೆಯಂತೆ ವೇಗಿ ಜಹೀರ್ ಖಾನ್ ಪಂದ್ಯಪುರುಷ ಪ್ರಶಸ್ತಿಯನ್ನು ಪಡೆದುಕೊಂಡರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications