ಕರಾವಳಿಯಲ್ಲಿ ಮುಸಲಧಾರೆ; ಜನಜೀವನ ಅಸ್ತವ್ಯಸ್ತ
ಉಡುಪಿ, ಆ.11 : ಉಡುಪಿ ನಗರವೂ ಸೇರಿದಂತೆ ಜಿಲ್ಲೆಯ ಕಾರ್ಕಳ, ಬೈಂದೂರು, ಕುಂದಾಪುರ ಪಟ್ಟಣಗಳಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಕುಂಭದ್ರೋಣ ಮಳೆಯಿಂದಾಗಿ ಜನಜೀವನವನ್ನು ಅಸ್ತವ್ಯಸ್ತವಾಗಿಸಿದೆ. ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದ್ದು ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಿದೆ.
ಕಾರ್ಕಳ, ಬೈಂದೂರು, ಕುಂದಾಪುರ ಹಾಗೂ ಉಡುಪಿ ಪಟ್ಟಣದ ಜನರು ಕಳೆದ ಕೆಲ ದಿನಗಳಿಂದ ಮಳೆಯ ಅಬ್ಬರ ತತ್ತರಿಸಿಹೋಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಕಷ್ಟ ಅನುಭವಿಸುತ್ತಿದ್ದಾರೆ.
ಕಾರವಾರ ಜಿಲ್ಲೆಯಲ್ಲಿಯೂ ಸಹ ವರುಣ ಅಬ್ಬರ ಮೀತಿಮೀರಿದೆ. ಅಂಕೋಲಾದ ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜಿಲ್ಲೆಯ ಅನೇಕ ಗ್ರಾಮಗಳು ನೆರೆಪೀಡಿತ ಪ್ರದೇಶಗಳಾಗಿವೆ. ಬಹುತೇಕ ಗ್ರಾಮಗಳಲ್ಲಿ ನೀರು ಹೊಕ್ಕಿದ್ದು, ಜನಜೀವನ ಅತಂತ್ರವಾಗಿದೆ. ವಾಸಿಸಲು ಮನೆ ಇಲ್ಲದಂತಾಗಿದ್ದು, ಜನರು ಶಾಲಾ ಕಾಲೇಜುಗಳಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ಜನರು ಸ್ಥಳಾಂತರಕ್ಕಾಗಿ ಅನೇಕ ಸಾರಿ ಸರ್ಕಾರದ ಮೊರೆ ಹೋಗಿದ್ದಾರೆ. ಪ್ರಯೋಜನ ಮಾತ್ರ ಶೂನ್ಯ. ಜನಪ್ರತಿನಿಧಿಗಳು ಬರೀ ಭರವಸೆ ನೀಡುತ್ತಾರೆ ಹೊರತು ಜನರ ಯಾವ ಬೇಡಿಕೆಯನ್ನು ಕಾರ್ಯಗತಗೊಳಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಈ ನಡುವೆ ಮೀನುಗಾರಿಕೆ ಸಚಿವ ಕಾರವಾರ ಸೇರದಂತೆ ಅನೇಕ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ನೆರೆ ಪರಿಸ್ಥಿತಿಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications