ಪಬ್ಗಳ ಮೇಲೆ ಖಾಕಿ ದೌರ್ಜನ್ಯ: ಕಾರ್ನಾಡ್ ಖಂಡನೆ
ಬೆಂಗಳೂರು, ಆ. 11 : ನಗರದ ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರ ಕ್ರಮವನ್ನು ಖಂಡಿಸಿ ವಾದ್ಯವೃಂದ ಕಲಾವಿದರು ಭಾನುವಾರಎಂ.ಜಿ ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸಿದರು. ಈ ಪ್ರತಿಭಟನೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಭಾಗವಹಿಸಿದ್ದರು.
ಬೆಂಗಳೂರಿನ ಓಪಸ್ ಪಬ್ನಲ್ಲಿ ವಿದೇಶಿ ಡ್ರಮ್ಮರ್ ವರ್ಜಲ್ ಎಂಬುವವರ ಕಾರ್ಯಕ್ರಮ ನಡೆಯುತ್ತಿತ್ತು. ಪೊಲೀಸರು ಈ ವಾದ್ಯವೃಂದದ ಮೇಳೆ ದಾಳಿ ನಡೆಸಿ ಸಂಗೀತ ಉಪಕರಣಗಳನ್ನು ವಶಪಡಿಸಿಕೊಂಡರು. ನಂತರ ಸಂಘಟಕರು ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಸಬೇಕಾಯಿತು. ಈ ಕಾರ್ಯಕ್ರಮದಲ್ಲಿ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಅಪರಾಧಿಗಳನ್ನು ಪತ್ತೆ ಹಚ್ಚುವುದು ಪೊಲೀಸರ ಕೆಲಸ. ಆದರೆ, ಇಂತಹವರು ಅಪರಾಧ ಮಾಡಬಹುದು ಎಂದು ಮೊದಲೇ ಊಹಿಸಿಕೊಂಡು ಅವರ ಮೇಲೆ ದಾಳಿ ಮಾಡುವುದು ದೌರ್ಜನ್ಯ. ಪೊಲೀಸರು ಈ ಕೆಲಸಕ್ಕೆ ಮುಂದಾಗುತ್ತಿರುವುದು ತಪ್ಪು. ಎಲ್ಲೋ ಯಾರೋ ಅರೆನಗ್ನವಾಗಿ ಕುಣಿದರು ಎಂದು ಎಲ್ಲ ಪಬ್ಗಳ ಮೇಲೆ ದಾಳಿ ಮಾಡುವುದು ಸರಿಯಾದ ಕ್ರಮವಲ್ಲ. ರಾತ್ರಿ 11ರ ನಂತರ ಬಾರ್ ಮತ್ತು ಪಬ್ ಗಳಲ್ಲಿ ಮದ್ಯಪಾನ ನಿಷೇಧಿಸುವುದು ಸೂಕ್ತ. ಆದರೆ, ಸಂಗೀತಗೋಷ್ಠಿಗಳ ಮೇಲೆ ನಿಷೇಧ ಹೇರುವುದು ಸರಿಯಾದ ಕ್ರಮವಲ್ಲ ಎಂದು ಕಾರ್ನಾಡ್ ಟೀಕಿಸಿದರು.
ಸರ್ಕಾರದ ಈ ನೀತಿಯಿಂದಾಗಿ ನೂರಾರು ಕಲಾವಿದರಿಗೆ ಅನ್ಯಾಯವಾಗಲಿದೆ. ಪೊಲೀಸರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಲುವಾಗಿ ಸಂಗೀತಗೋಷ್ಠಿಗಳನ್ನು ನಿಷೇಧಿಸಲು ಮುಂದಾಗಿದ್ದಾರೆ. ಇದರಿಂದ ಅಪರಾಧ ಕೃತ್ಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಪೊಲೀಸರ ಈ ಕ್ರಮದಿಂದ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ವೃತ್ತಿಯನ್ನೇ ನಂಬಿ ಬದುಕುತ್ತಿರುವ ಸಂಗೀತ ಕಲಾವಿದರ ಕುಟುಂಬಗಳು ಬೀದಿ ಪಾಲಾಗಲಿವೆ. ಜತೆಗೆ ಸಂಗೀತ ಪ್ರೇಮಿಗಳೂ ತಮ್ಮ ಇಷ್ಟದ ಸಂಗೀತವನ್ನು ಆಹ್ವಾದಿಸುವುದನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿರ್ಧಾರದ ಕುರಿತು ಸರ್ಕಾರ ಕೂಲಂಕಷವಾಗಿ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇದೇ ನಿರ್ಧಾರ ಮುಂದುವರೆಸಿದಲ್ಲಿ ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಕಾರ್ನಾಡ ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕರವೇದಾಳಿಗೆ ದಾಳಿಗೆ ಸಿಕ್ಕ ವೀಕೆಂಡ್ ಗಾಂಜಾ ಪಾರ್ಟಿ