15 ದಿನದೊಳಗೆ ಬಿಬಿಎಂಪಿ ಚುನಾವಣೆಗೆ ಒತ್ತಾಯ
ಬೆಂಗಳೂರು, ಆ. 5 : ನ್ಯಾಯಾಲಯದ ಆದೇಶದಂತೆ ಮೂರು ತಿಂಗಳೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಚುನಾವಣೆಯನ್ನು ನಡೆಸಬೇಕಿರುವ ಹಿನ್ನಲೆಯಲ್ಲಿ 15 ದಿನದೊಳಗಾಗಿ ಚುನಾವಣೆ ಪ್ರಕ್ರಿಯೆ ಕುರಿತು ಆದೇಶ ಹೊರಡಿಸುವಂತೆ ಮಾಜಿ ಮೇಯರ್ ಪಿ.ಆರ್.ರಮೇಶ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೆಂಗಳೂರು ಮಹಾನಗರ ಪಾಲಿಕೆ ಜನಪ್ರನಿಧಿಗಳಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದು. ಕೂಡಲೇ ಚುನಾವಣೆ ನಡೆಸಬೇಕು ಎಂದು ಮಾಜಿ ಮೇಯರ್ ಪಿ.ಆರ್.ರಮೇಶ್ ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಲಯ, ಮಹಾನಗರ ಪಾಲಿಕೆ ಚುನಾವಣೆ ನಡೆಸದೇ ನಿರ್ಲಕ್ಷ ಧೋರಣೆ ತಾಳಿದ್ದ ಸರ್ಕಾರ ಮತ್ತು ರಾಜ್ಯ ಚುನಾವಣೆ ಆಯೋಗದ ಕ್ರಮವನ್ನು ತರಾಟೆಗೆ ತಗೆದುಕೊಂಡಿತ್ತು. ಚುನಾವಣೆಗೆ ಉಂಟಾಗಿರುವ ಅಡ್ಡಿ ಆತಂಕಗಳನ್ನು ಶೀಘ್ರದಲ್ಲಿ ಬಗೆಹರಿಸಿಕೊಂಡು ಮೂರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಜು.2, 2008ರಂದು ಸೂಚನೆ ನೀಡಿತ್ತು.
ನ್ಯಾಯಲಯ ಆದೇಶ ನೀಡಿ ತಿಂಗಳು ಕಳೆದರೂ ಚುನಾವಣೆ ನಡೆಸುವ ಯಾವುದೇ ಪ್ರಕ್ರಿಯೆಗಳನ್ನು ರಾಜ್ಯ ಚುನಾವಣೆ ಆಯೋಗ ತಗೆದುಕೊಳ್ಳದ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಪಿ. ಆರ್.ರಮೇಶ್ ಇನ್ನು 15 ದಿನದೊಳಗೆ ಬಿಬಿಎಂಪಿ ಚುನಾವಣೆಗೆ ಚಾಲನೆ ನೀಡಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)