ಅಮರನಾಥ್ ಭೂವಿವಾದ : ಸರ್ವಪಕ್ಷಗಳ ಸಭೆಗೆ ಕರೆ
ನವದೆಹಲಿ, ಆ. 5 : ಜಮ್ಮು ಕಾಶ್ಮೀರದಲ್ಲಿ ಅಮರನಾಥ ಭೂವಿವಾದದ ದಲ್ಲುರಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದೆ. ಕೇಂದ್ರ ಸರ್ಕಾರಕ್ಕೆ ತೀವ್ರ ತಲೆನೋವಾಗಿರುವ ಭೂವಿವಾದದ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿರುವುದರಿಂದ ಇಬ್ಬರು ಉತ್ತಮಮಟ್ಟದ ಅಧಿಕಾರಿಗಳು ಇಂದು ಜಮ್ಮುಗೆ ತೆರಳಿದ್ದಾರೆ. ಈ ಮಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಜಮ್ಮುನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಮೂರು ಪ್ರತಿಭಟನಾನಿರತ ಕಾರ್ಯಕರ್ತರು ಮೃತಪಟ್ಟಿದ್ದಾರೆ. 12 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಡಪಕ್ಷಗಳು, ಬಹುಜನ ಸಮಾಜಪಕ್ಷ, ಭಾರತೀಯ ಜನತಾ ಪಕ್ಷ, ನ್ಯಾಷನಲ್ ಕಾನ್ಫರನ್ಸ್ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಜಮ್ಮು ನಲ್ಲಿ ನಡೆಯುತ್ತಿರುವ ಹಿಂಚಾಚಾರಕ್ಕೆ ಬಿಜೆಪಿ ಮುಖ್ಯ ಕಾರಣವಾಗಿದ್ದು, ಹಿಂದುಪರ ಸಂಘಟನೆಗಳಿಗೆ ಬಿಜೆಪಿ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ದಲ್ಲುಳಿ ಭುಗಿಲೆಳಲು ಕಾರಣವಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಭಾಗವಹಿಸುವ ನಿರೀಕ್ಷೆಯಿದೆ.
ಕಳೆದ ತಿಂಗಳಿನಿಂದ ಜಮ್ಮು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ತೀವ್ರವಾದ ಹಿಂಸಾಚಾರ ಜರುಗಿದೆ. ಅಮರನಾಥ ಭೂವಿವಾದ ಜನಸಾಮಾನ್ಯರ ಬದುಕನ್ನು ನುಂಗಿಹಾಕಿದೆ. ಶಾಲಾ ಕಾಲೇಜುಗಳು ಬೀಗ ಜಡಿದುಕೊಂಡಿವೆ. ಈ ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ನೂರಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಕಣಿವೆ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಭಾರಿ ಹೊಡೆತ ಬಿದ್ದಿದ್ದು, ಸುಮಾರು 80 ಕೋಟಿ ರು.ಗಳ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications