ಸರಣಿ ಸ್ಫೋಟ : ಮೂವರು ಶಂಕಿತ ಉಗ್ರರು ವಶಕ್ಕೆ
ಬೆಂಗಳೂರು, ಜು. 25 : ಸ್ಫೋಟದ ಹಿನ್ನಲೆಯಲ್ಲಿ ನಗರದ ಸುಬ್ರಮಣ್ಯ ನಗರದ ಪೊಲೀಸರು ಮೂವರು ಶಂಕಿತ ಉಗ್ರರನ್ನು ವಶಕ್ಕೆ ತಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ಮುಂದುವರೆದಿದ್ದು ಮಹತ್ವದ ವಿಷಯ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಾಂತಿ ಸುವ್ಯವಸ್ಥೆ ಕಾಪಾಡಿ ಯಡಿಯೂರಪ್ಪ
ನಗರದ ಶಾಂತಿ ಕದಡಲು ವ್ಯವಸ್ಥಿತವಾದ ಪಿತೂರಿ ನಡೆದಿದೆ. ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಸ್ಫೋಟದ ಹಿನ್ನಲೆಯಲ್ಲಿ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿಯವರು ಸಭೆಗೆ ಹಾಜರಾಗುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಶಾಂತಿ ಸಮಾಧಾನದಿಂದ ವರ್ತಿಸಿ ಎಂದರು. ಶುಕ್ರವಾರ ನಡೆದಿರುವ ಘಟನೆಯನ್ನು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರ ತುಂಬಾ ಸುತ್ತ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಘಟನಾ ಸ್ಥಳದ ಪರಿಶೀಲನೆಯನ್ನು ತಜ್ಞರು ನಡೆಸಿದ್ದಾರೆ. ಸ್ಫೋಟದ ಹಿಂದಿರುವ ಕೈಗಳನ್ನು ಶೀಘ್ರದಲ್ಲಿ ಬೇಧಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಭಯಬೀತರಾಗದೆ ಸಂಯಮದಿಂದ ವರ್ತಿಸಿ ಎಂದು ಪುನರುಚ್ಛರಿಸಿದ ಅವರು, ಘಟನೆಯಲ್ಲಿ ಮತಪಟ್ಟಿರುವ ಲಕ್ಷ್ಮಿ ಎಂಬ ಮಹಿಳೆಯ ಕುಟುಂಬಕ್ಕೆ 1 ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಗಾಯಗೊಂಡು ಮಲ್ಯ ಮತ್ತು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿಚಾರಣೆಗೆ ಗೃಹ ಸಚಿವ ವಿ.ಎಸ್.ಆಚಾರ್ಯ ತೆರಳಿದ್ದಾರೆ. ಗಾಯಾಳುಗಳ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸಲಿದೆ ಎಂದು ಯಡಿಯೂರಪ್ಪ ಹೇಳಿದರು. ಸ್ಫೋಟ ನಡೆದ ಸ್ಥಳಕ್ಕೆ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ತೆರಳಿದ್ದಾರೆ. ಅವರು ಬಂದ ಸ್ಪಷ್ಟ ಚಿತ್ರ ದೊರೆಯಲಿದ್ದು, ಎಲ್ಲ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಕ್ಷಣೆ
ಸ್ಫೋಟದ ಹಿನ್ನೆಲೆಯಲ್ಲಿ ನಗರದ ವಿಧಾನಸಭೆ, ಹೈಕೋರ್ಟ್, ಇಸ್ಕಾನ್, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ಸರ್ಕಾರಿ ಕಚೇರಿಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಿಗೂ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ನೆರವು
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಗರದ ಸ್ಪೋಟ ಘಚನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬೇಕಿರುವ ಎಲ್ಲ ಸಹಾಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಭರವಸೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮತ್ತಷ್ಟು ಸುದ್ದಿಗಳು
ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?
ಸ್ಪೋಟದ ಹಿನ್ನಲೆಯಲ್ಲಿ ಸಂಜೆ ತುರ್ತು ಸಂಪುಟ ಸಭೆ
ಬೆಂಗಳೂರಿಗರಿಗೆ ಇಂದು ಕರಾಳ ಶುಕ್ರವಾರ
ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ
ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ












Click it and Unblock the Notifications