ಕಾಡಾನೆ ದಾಳಿಗೆ ಸಿಕ್ಕಿ ಪಶುವೈದ್ಯ ಡಾ. ವಿಶ್ವನಾಥ್ ಮರಣ
ಬೆಂಗಳೂರು, ಜ.03: ಎರಡು ತಿಂಗಳ ಹಿಂದೆ ಕಾಡಾನೆಯ ದಾಳಿಗೆ ಸಿಲುಕಿ ಗಾಯಗೊಂಡಿದ್ದ ರಾಜ್ಯಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಿ.ಕೆ. ವಿಶ್ವನಾಥ್ (52) ಬುಧವಾರ ನಸುಕಿನಲ್ಲಿ ಖಾಸಗಿ ಆಸ್ಪತೆಯಲ್ಲಿ ನಿಧನರಾಗಿದ್ದಾರೆ.
ನಗರದ ಚಂದ್ರಾ ಲೇಔಟ್ ನ ಗುರುಶ್ರೀ ಆಸ್ಪತ್ರೆಯಲ್ಲಿ ಎರಡು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಡಾ. ವಿಶ್ವನಾಥ್ ರವರು ಬುಧವಾರ (ಜ.2) ಮುಂಜಾನೆ 4:30ಕ್ಕೆ ಅಸುನೀಗಿದರು. ಪತ್ನಿ ಜಗದಾಂಬಾ ಮತ್ತು ರಾಕೇಶ್ ಅವರನ್ನುಅಗಲಿದ್ದಾರೆ.
ಉದ್ಯಾನದಲ್ಲಿ ಸಾಕಿದ ಆನೆಯೊಂದಿಗೆ ಕಾಡಾನೆಯನ್ನು ಕಂಡು , ಅದನ್ನು ಹೊರಕ್ಕೆ ಅಟ್ಟಲು ಯತ್ನಿಸಿದ ಡಾ. ವಿಶ್ವನಾಥ್ ಅವರ ಮೇಲೆ ದಾಳಿ ನಡೆಸಿದ ಕಾಡಾನೆ, ಅವರ ಕುತ್ತಿಗೆ ಹಾಗೂ ಬೆನ್ನು ಹುರಿಯ ಮೇಲೆ ತೀವ್ರವಾಗಿ ಗಾಯಗೊಳಿಸಿದ್ದು, ಜೀವಕ್ಕೆ ಮಾರಕವಾಗಿ ಪರಿಣಮಿಸಿತು ಎಂದು ಅರಣ್ಯ ಸಿಬ್ಬಂದಿಗಳು ಹೇಳಿದರು.
ಚಾಮರಾಜಪೇಟೆಯ ಟಿ.ಆರ್. ಮಿಲ್ ಚಿತಾಗಾರದಲ್ಲಿ ಬುಧವಾರ ಸಂಜೆ ವೇಳೆಗೆ ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.ವಿಶ್ವನಾಥ್ ಅವರಿಗೆ ಅಂತಿಮ ನಮನ ಸಲ್ಲಿಸಲು ಪ್ರಧಾನ ಅರಣ್ಯ ವನ್ಯಜೀವಿ ಸಂರಕ್ಷಾಣಾಧಿಕಾರಿ ಶ್ರೀವಾಸ್ತವ, ಎ.ಎ. ವರ್ಮ, ಬನ್ನೇರುಘಟ್ಟ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಮಾರ್ಕಂಡೇಯ ಮುಂತಾದವರು ಹಾಜರಿದ್ದರು.
ಪ್ರಾಣಿ ಸಂರಕ್ಷಕ, ಶಿಸ್ತಿನ ಅಧಿಕಾರಿ :
ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ.ವಿಶ್ವನಾಥ್ ಅವರು, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮಿಳುನಾಡಿನ ಹೊಸೂರಿನಲ್ಲಿ ಚಿರತೆಯೊಂದನ್ನು ಸಂರಕ್ಷಿಸಿದ್ದು, ನಾಗರಹೊಳೆಯಲ್ಲಿ ಬೋನಿಗೆ ಬಿದ್ದು ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಮಾಸ್ತಿ ಎಂಬ ಹುಲಿಯನ್ನು ಶುಶ್ರೂಷೆ ಮಾಡಿ ಉಳಿಸಿಕೊಂಡಿದ್ದು, ಅವರ ಸಾಧನೆಯ ಪಟ್ಟಿಯಲ್ಲಿ ಸೇರಿದೆ. ಇದಲ್ಲದೆ ವನ್ಯ ಜೀವಿಗಳ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಆನೆ , ಹುಲಿ, ಸಿಂಹ ಮುಂತಾದ ಕಾಡಿನ ಪ್ರಾಣಿಗಳಿಗೆ ಅರಿವಳಿಕೆ ಮದ್ದು ನೀಡುವ ತಜ್ಞರಾಗಿ ಖ್ಯಾತರಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications