ಇಂದು ಪವಿತ್ರ ದಿನ; ಕಾವೇರಮ್ಮ ದರ್ಶನ ನೀಡಿದ ದಿನ!
ಮಡಿಕೇರಿ, ಅ.18 : ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಗುರುವಾರ(ಅ.18) ಸಡಗರವೋ ಸಡಗರ. ತಾಯಿ ಕಾವೇರಿ ತೀರ್ಥೋತ್ಭವವಾಗುವುದನ್ನು ಕಂಡ ಸಾವಿರಾರು ಮಂದಿ ಪುಳಕಿತರಾದರು. ಪವಿತ್ರ ಸ್ನಾನ ಮಾಡಿ ಸಾರ್ಥಕತೆ ಅನುಭವಿಸಿದರು.
ಜೈ ಕಾವೇರಮ್ಮ, ಗೋವಿಂದಾ ಗೋವಿಂದಾ ಎಂದು ಭಾವುಕರಾಗಿ ಭಕ್ತಿ ಶ್ರದ್ಧೆಯಿಂದ ಕೂಗುತ್ತಿದ್ದ ಭಕ್ತರು, ತೀರ್ಥೋದ್ಭುವವಾಗುವ ಪುಟ್ಟ ಕುಂಡಿಕೆ ಬಳಿಗೆ ಹೋಗಲು ಪರದಾಡಿದರು. ತೀರ್ಥ ಸ್ಪರ್ಶ ಮಾಡಲು ಉತ್ಸುಕತೆ ತೋರಿದರು. ಗುರುವಾರ ಬೆಳಗ್ಗೆ 8.19ರ ಸುಮಾರಿನಲ್ಲಿ ತೀರ್ಥೋದ್ಬವವಾಯಿತು. ತುಲಾ ಸಂಕ್ರಮಣ ಮುಹೂರ್ತವನ್ನು ಹೊಂದಿರುವ ಈ ದಿನ ಅತಿ ಪಾವಿತ್ರ್ಯತೆಯನ್ನು ಪಡೆದಿದೆ.
ಮಕ್ಕಳು, ಮಹಿಳೆಯರು, ಮದುಕರು ಸೇರಿದಂತೆ ಸಾವಿರಾರು ಜನರಿಂದ ತಲಕಾವೇರಿ ತುಂಬಿ ತುಳುಕುತ್ತಿತ್ತು. ಜಿಲ್ಲಾಧಿಕಾರಿ ನಿರಂಜನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತ್ರಿಲೋಕ್ ಚಂದ್ರ, ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಹೆಚ್.ಡಿ.ಬಸವರಾಜು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ತಲಕಾವೇರಿ ಅಭಿವೃದ್ಧಿಗೆ ಕರ್ನಾಟಕ ಕಾವೇರಿ ಅಭಿವೃದ್ಧಿ ಪ್ರಾಧಿಕಾರ ಕೈ ಹಾಕಿದ ಮೇಲೆ ನಡೆಯುತ್ತಿರುವ ಮೊದಲ ತೀರ್ಥೋದ್ಭವ ಕಾರ್ಯಕ್ರಮ ಇದಾಗಿದೆ. ಆ ಕ್ಷಣಕ್ಕೆ ಸಾಕ್ಷಿಯಾಗಲು ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆಯಿಂದ ಜನರು ತಲಕಾವೇರಿಗೆ ಆಗಮಿಸಿದ್ದರು.
(ಯುಎನ್ಐ)












Click it and Unblock the Notifications