ಸರ್ಕಾರ, ಜನರಿಗೆ ನಾರಾಯಣಮೂರ್ತಿ ಉಪದೇಶಾಮೃತ!
ಬೆಂಗಳೂರು : ರಾಜಧಾನಿ ನಗರದ ಹೆಸರು ಬದಲಾವಣೆ ಕುರಿತಂತೆ ಚರ್ಚೆ ನಡೆಸುವುದರಿಂದ ಸಮಯ ವ್ಯರ್ಥ ಎಂದು ಇನ್ಫೋಸಿಸ್ ಕಾರ್ಯಭಾರ ರಹಿತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಉಚಿತ ಸಲಹೆ(ಉಪದೇಶಾಮೃತ) ನೀಡಿದ್ದಾರೆ.
ಇನ್ಫೋಸಿಸ್ ತುರ್ತು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಮ್ಮ ಶಕ್ತಿ ಮತ್ತು ಸಾಮಾರ್ಥ್ಯವನ್ನು ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿನ ಸಾಮಾನ್ಯ ಜನರ ಬದುಕು ಸುಧಾರಿಸಲು ಬಳಸಿಕೊಳ್ಳಬೇಕು. ಬೆಂಗಳೂರು ಹೆಸರು ಬದಲಾವಣೆ ಚರ್ಚೆಯ ವಿಷಯವೇ ಅಲ್ಲ ಎಂದು ಹೇಳಿದರು.
ಕನ್ನಡಿಗ ಊರುಗಳ ಹೆಸರುಗಳನ್ನು ಪ್ರಸ್ತುತ ಸರಿಯಾಗಿಯೇ ಬಳಸುತ್ತಿದ್ದಾನೆ. ಕೆಲವೆಡೆ ಉಚ್ಚಾರ ದೋಷ ಉಂಟಾಗಿರಬಹುದು. ಅದೇನು ಮಹತ್ವದ ವಿಚಾರವಲ್ಲ. ಅಲ್ಲದೇ ನಾವುಗಳು ಚಿಂತಿಸಲು ಮತ್ತು ಸರಿಪಡಿಸಲು ನಾಡಿನಲ್ಲಿ ಸಾಕಷ್ಟು ಸಂಗತಿಗಳಿವೆ ಎಂದು ಹೇಳಿದರು.
ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸಲು, ರಸ್ತೆ ಸಂಚಾರ ಸುಧಾರಿಸಲು, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು, ಆರೋಗ್ಯ ಸುಧಾರಣೆಗೆ, ಮಾಲಿನ್ಯ ನಿವಾರಣೆಗೆ ನಾವುಗಳು ಒತ್ತುನೀಡಬೇಕು ಎಂದು ನಾರಾಯಣ ಮೂರ್ತಿ ಸಲಹೆ ನೀಡಿದರು.
(ಯುಎನ್ಐ)











Click it and Unblock the Notifications