ರಜೆ ದಿನದ ಮಜೆ: ಕೋಣನಕುಂಟೆಯಲ್ಲಿ ವೈವಿಧ್ಯಮಯ ಹಾಸ್ಯೋತ್ಸವ
ರಜೆ ದಿನದ ಮಜೆ: ಕೋಣನಕುಂಟೆಯಲ್ಲಿ ವೈವಿಧ್ಯಮಯ ಹಾಸ್ಯೋತ್ಸವ
ನಟ ನಾಗರಾಜ ಕೋಟೆ ಮತ್ತು ತಂಡದಿಂದ ಜೋರು ನಗೆಯ ಹಬ್ಬ !
ಡಿಸೆಂಬರ್ 19ರ ಭಾನುವಾರದ ರಜಾದಿನವನ್ನು ಮಜಾದಿನವನ್ನಾಗಿ ಸವಿಯಲು ಕೋಣನಕುಂಟೆಯ ಸೌಧಾಮಿನಿ ಕಲ್ಯಾಣಮಂಟಪದಲ್ಲೊಂದು ಹಾಸ್ಯ ಚಪ್ಪರ ಸಿದ್ಧವಾಗಿದೆ. ಈ ಆವರಣಕ್ಕೆ ನಗಲು ಬರುವವರು ಹಾಗೂ ನಗಲು ಬಯಸುವವರು ಯಾರು ಬೇಕಾದರೂ ಬರಬಹುದು. ನಗೆ ಉಚಿತ.
ಭಾನುವಾರ ಸಂಜೆ 4.30 ಕ್ಕೆ ಹಾಸ್ಯೋತ್ಸವ ಶುರು. ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ವೈವಿಧ್ಯಮಯ ಹಾಸ್ಯೋತ್ಸವ ಕಾರ್ಯಕ್ರಮವಿದು ಎಂದು ಆಯೋಜಕರು ಹೇಳಿಕೊಂಡಿದ್ದಾರೆ. ಚಲನಚಿತ್ರ ಮತ್ತು ಕಿರುತೆರೆಯ ಹಾಸ್ಯನಟ ನಾಗರಾಜ ಕೋಟೆ ಮತ್ತು ತಂಡದವರಿಂದ ನಗೆಯ ಹಬ್ಬವಿದೆ. ವಿನೂತನವಾದ ಅಡೆತಡೆಯಿಲ್ಲದ ಹಾಸ್ಯಕಾರ್ಯಕ್ರಮವನ್ನು ಸಹೃದಯ ಕಲಾಭಿಮಾನಿಗಳಿಗಾಗಿಯೇ ಆಯೋಜಿಸಲಾಗಿದೆ.
ಸಂಘದ ಅಧ್ಯಕ್ಷ ಹೆಚ್.ಕೆ. ನಾಗೇಂದ್ರ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಂಟಿ ಚುನಾವಣಾಧಿಕಾರಿ ನೊಣವಿನಕೆರೆ ಕ್ಷೇತ್ರಪಾಲ್, ಅಪರಂಜಿ ಪತ್ರಿಕೆ ಸಂಪಾದಕ ಎಂ.ಶಿವಕುಮಾರ್, ಉದಯ ಟಿ.ವಿ. ಕಾರ್ಯಕಾರಿ ನಿರ್ಮಾಪಕ ಎಸ್.ಎಲ್.ಎನ್.ಸ್ವಾಮಿ ಹಾಗೂ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವವರು ಹದಿನೈದು ನಿಮಿಷ ಮುಂಚೆ ಬೆಚ್ಚನೆ ಉಡುಪಿನೊಂದಿಗೆ ಆಗಮಿಸುವಂತೆ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications