ಕೃಷ್ಣ ನೇಮಕಕ್ಕೆ ಶಿವಸೇನೆಯ ವಿರೋಧ
ಡಿ.6 ಕೃಷ್ಣ ಅಧಿಕಾರ ಸ್ವೀಕಾರ ; ಕೃಷ್ಣ ನೇಮಕಕ್ಕೆ ಶಿವಸೇನೆಯ ವಿರೋಧ ಚಾಮರಾಜ ಪೇಟೆ ಶಾಸಕ ಸ್ಥಾನಕ್ಕೆ ಡಿ.4ರಂದು ಕೃಷ್ಣ ರಾಜೀನಾಮೆ
ಬೆಂಗಳೂರು : ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಡಿ.6ರಂದು ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಪ್ರಸ್ತುತ ಚೀನಾ ಪ್ರವಾಸದಲ್ಲಿರುವ ಕೃಷ್ಣ ಡಿಸೆಂಬರ್ 2 ರಂದು ನವದೆಹಲಿಗೆ ಬರಲಿದ್ದು , ಅಲ್ಲಿಂದ ಬೆಂಗಳೂರಿಗೆ ಆಗಮಿಸುವರು. ಡಿ.3ರಂದು ತಮ್ಮನ್ನು ಗೆಲ್ಲಿಸಿದ ಚಾಮರಾಜಪೇಟೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಭೆ ನಡೆಸುವರು. ಡಿ.6ರಂದು ಮಹಾರಾಷ್ಟ್ರ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸುವರು ಎಂದು ಅವರ ನಿಕಟವರ್ತಿ ಮೂಲಗಳು ತಿಳಿಸಿವೆ. ನವಂಬರ್ 27ರಂದು ಮಹಾರಾಷ್ಟ್ರ ರಾಜ್ಯಪಾಲರಾಗಿ ಕೃಷ್ಣ ಅವರನ್ನು ನೇಮಿಸಲಾಗಿತ್ತು .
ಈ ನಡುವೆ ರಾಜ್ಯಪಾಲರಾಗಿ ಕೃಷ್ಣ ಅವರ ನೇಮಕಕ್ಕೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉಭಯ ರಾಜ್ಯಗಳ ನಡುವಣ ಗಡಿ ವಿವಾದ ಜೀವಂತವಾಗಿರುವಾಗ ಕೃಷ್ಣ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವ ಕ್ರಮ ಸರಿಯಾದುದಲ್ಲ . ಈ ಮುನ್ನ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮಹಾರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗುವಂತೆ ವರ್ತಿಸಿದ್ದರು. ಅಂಥ ವ್ಯಕ್ತಿಯನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದು ಸರಿಯಾದ ಕ್ರಮವಲ್ಲ ಎಂದು ಶಿವಸೇನೆ ಹೇಳಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ನಡುವಣ ಗಡಿ ವಿವಾದ ಬಗೆಹರಿಯುವವರೆಗೂ ಉಭಯ ರಾಜ್ಯಗಳ ವ್ಯಕ್ತಿಗಳನ್ನು ಎರಡೂ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸುವುದು ಸರಿಯಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.(ಇನ್ಫೋ ವಾರ್ತೆ)












Click it and Unblock the Notifications