Get Updates
Get notified of breaking news, exclusive insights, and must-see stories!

ಕನ್ನಡ ಹಾಗೂ ಮರಾಠಿ ಅವಳಿಗಳಿದ್ದಂತೆ: ಅಡಿಗರ ಹಬ್ಬದಲ್ಲಿ ವಿಶ್ವಾಸ್‌

ಕನ್ನಡ ಹಾಗೂ ಮರಾಠಿ ಅವಳಿಗಳಿದ್ದಂತೆ: ಅಡಿಗರ ಹಬ್ಬದಲ್ಲಿ ವಿಶ್ವಾಸ್‌
ಗೋಪಾಲಕೃಷ್ಣ ಅಡಿಗರ ಸಿದ್ಧಿಸಾಧನೆಯ ಬಗೆಗೆ ಕನ್ನಡ ಚಿಂತಕರ ಪ್ರಶಂಸೆ

ಬೆಂಗಳೂರು : ಕನ್ನಡ ಹಾಗೂ ಮರಾಠಿ ಭಾಷೆಗಳು ಅವಳಿಗಳಿದ್ದಂತೆ ಎಂದು ಪ್ರಸಿದ್ಧ ಮರಾಠಿ ಲೇಖಕ ವಿಶ್ವಾಸ್‌ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಮರಾಠಿ ಸಾಹಿತ್ಯಕ್ಕೆ ಅನೇಕ ಕನ್ನಡ ಬರಹಗಾರರು ಗಣನೀಯ ಕೊಡುಗೆ ನೀಡಿದ್ದಾರೆ. ಅದೇರೀತಿ ಕನ್ನಡ ಸಾಹಿತ್ಯವನ್ನು ಮರಾಠಿ ಲೇಖಕರು ಶ್ರೀಮಂತಗೊಳಿಸಿದ್ದಾರೆ ಎಂದು ವಿಶ್ವಾಸ್‌ ಪಾಟೀಲ್‌ ಹೇಳಿದರು. ಅ.1ರ ಶುಕ್ರವಾರ ಬೆಂಗಳೂರಿನ ಸುರಾನ ವಿದ್ಯಾಲಯದಲ್ಲಿ ಪ್ರಾರಂಭವಾದ ‘ಗೋಪಾಲಕೃಷ್ಣ ಅಡಿಗ-ಸಂಸ್ಕೃತಿ ಅನುಸಂಧಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶ್ವಾಸ್‌ ಪಾಟೀಲ್‌ ಮಾತನಾಡುತ್ತಿದ್ದರು. ಗೋಪಾಲಕೃಷ್ಣ ಅಡಿಗ ಟ್ರಸ್ಟ್‌, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಸುರಾನಾ ಮಹಾ ವಿದ್ಯಾಲಯ ಎರಡು ದಿನಗಳ ಈ ಕಾರ್ಯಕ್ರಮವನ್ನು ಏರ್ಪಡಿಸಿವೆ. ಅ.2ರ ಶನಿವಾರ ಸಮಾರೋಪ.

ಮಹಾರಾಷ್ಟ್ರ ಹಾಗೂ ಕರ್ನಾಟಕಗಳ ನಡುವಿನ ಸಂಬಂಧವನ್ನು ರಾಜಕಾರಣಿಗಳು ವೃದ್ಧಿಸಿದರೆ, ಸಾಹಿತಿಗಳು ಉಭಯ ರಾಜ್ಯಗಳ ಜನತೆಯ ನಡುವೆ ಬೆಸುಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ವಾಸ್‌ ಪಾಟೀಲ್‌ ಅಭಿಮಾನದಿಂದ ಹೇಳಿದರು.

ತಮ್ಮ ಕಟು ಐರನಿ ಹಾಗೂ ವಿಡಂಬನೆಯಿಂದ ರಾಜಕೀಯಕ್ಕೆ ಮುಖಾಮುಖಿಯಾಗುವ ಯಶಸ್ವೀ ಪ್ರಯತ್ನವನ್ನು ಗೋಪಾಲಕೃಷ್ಣ ಅಡಿಗ ನಡೆಸಿದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿ ಉಪ ಕುಲಪತಿ ಡಾ.ಬಿ.ಎ.ವಿವೇಕರೈ ಅಭಿಪ್ರಾಯಪಟ್ಟರು. ಭಾಷಾತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ , ಅಡಿಗರ ಪತ್ನಿ ಲಲಿತಾ ಅಡಿಗ, ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತ್ಯ ಅಕಾಡೆಮಿಯ ಅಗ್ರಹಾರ ಕೃಷ್ಣಮೂರ್ತಿ, ಸುರಾನ ಕಾಲೇಜಿನ ಮೇನೇಜಿಂಗ್‌ ಟ್ರಸ್ಟಿ ಅರ್ಚನಾ ಸುರಾನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕನ್ನಡದ ಪೆಂಪು ವಿಶ್ವಕ್ಕೆ ಗೊತ್ತಿದೆ !

ಶಾಸ್ತ್ರೀಯ ಭಾಷೆ ಪಟ್ಟವನ್ನು ಕರ್ನಾಟಕ್ಕೆ ನೀಡಿ ಎಂದು ವಾದ ಮಂಡಿಸುವಲ್ಲಿ ಯಾವುದೇ ಅರ್ಥವಿಲ್ಲ . ಪಂಪನ ಯುಗದಿಂದಲೇ ಕನ್ನಡದ ಶ್ರೇಷ್ಠತೆಯನ್ನು ಜಗತ್ತು ಗಮನಿಸಿದೆ ಎಂದು ‘ಗೋಪಾಲಕೃಷ್ಣ ಅಡಿಗ-ಸಂಸ್ಕೃತಿ ಅನುಸಂಧಾನ’ ಕಾರ್ಯಕ್ರಮದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೀ.ರಂ.ನಾಗರಾಜ್‌ ಹೇಳಿದರು.

ಜಾಗತೀಕರಣದ ಅಪಾಯವನ್ನು ಅಡಿಗರು ಆ ದಿನಗಳಲ್ಲೇ ಊಹಿಸಿದ್ದರು. ಪಶ್ಚಿಮದ ಗಾಳಿಯ ಪ್ರಭಾವವನ್ನು ತಡೆಗಟ್ಟದಿದ್ದರೆ ನಮ್ಮ ಸ್ವಂತಿಕೆಗೆ ಅಪಾಯ ಖಚಿತ ಎಂದು ಅಡಿಗರು ಸ್ಪಷ್ಟವಾಗಿ ಹೇಳಿದ್ದರು ಎಂದು ಕೀ.ರಂ. ಹೇಳಿದರು.

ಉನ್ನತ ಆದರ್ಶಗಳ ಶೋಧದ ಬಗ್ಗೆ ಅಡಿಗರು ಆಶಾವಾದ ಹೊಂದಿದ್ದರು ಎಂದು ಗೋಷ್ಠಿಯಲ್ಲಿ ಮಾತಾಡಿದ ಡಾ.ಶಿವರಾಮ ಪಡಿಕ್ಕಲ್‌ ಹೇಳಿದರು. ಲೇಖಕ ತನ್ನ ಸ್ವಂತ ಕೃತಿಗಳನ್ನು ವಿಮರ್ಶೆಗೊಳಪಡಿಸುವ ಅಡಿಗರ ನಿಲುವು ಸರಿಯಾದುದು ಎಂದು ಪಡಿಕ್ಕಲ್‌ ಅಭಿಪ್ರಾಯಪಟ್ಟರು. ಇದೇ ಗೋಷ್ಠಿಯಲ್ಲಿ ಮಾತಾನಾಡಿದ ಡಾ.ರಾಜೇಂದ್ರ ಚೆನ್ನಿ- ಬಂಡವಾಳ ಶಾಹಿ ಹಾಗೂ ಪ್ರಾಚೀನ ರಾಜಕೀಯ ಪದ್ಧತಿಗಳನ್ನು ಅಡಿಗರು ವಿರೋಧಿಸಿದರು. ಸಾಂಸ್ಕೃತಿಕ, ಸಾಮಾಜಿಕ ಹಾಗೂ ವ್ಯಕ್ತಿಗತ ಪರಿಶುದ್ಧತೆಯ ಅಗತ್ಯವನ್ನು ಅಡಿಗರು ಒತ್ತಿ ಹೇಳಿದರು ಎಂದರು.

ಅಡಿಗ ಎಂಬ ಪ್ರಜಾಪ್ರಭುತ್ವವಾದಿ

ಪ್ರಜಾಪ್ರಭುತ್ವದ ಬಗೆಗೆ ಅಡಿಗರಿಗಿದ್ದ ನಂಬಿಕೆಯನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದು ಪ್ರೊ.ಮುರಳೀಧರ ಉಪಾಧ್ಯಾಯ. ಪ್ರಜಾಪ್ರಭುತ್ವದ ಮೂಲಕ ಮಾತ್ರ ಉತ್ತಮ ಆಡಳಿತ ಸಾಧ್ಯ ಎಂದು ಅಡಿಗರು ನಂಬಿದ್ದರು. ತಮ್ಮ ಬರವಣಿಗೆಗಳ ಮೂಲಕ ಅಡಿಗರು ಹೊಸ ದೃಷ್ಟಿಕೋನ ಹಾಗೂ ಕ್ರಾಂತಿಕಾರಿ ರಾಜಕೀಯವನ್ನು ಪ್ರತಿಪಾದಿಸಿದರು ಎಂದು ಉಪಾಧ್ಯಾಯ ಹೇಳಿದರು. ಅವರು ಎರಡನೇ ಗೋಷ್ಠಿಯಲ್ಲಿ ‘ಅಡಿಗರ ಸಾಹಿತ್ಯ ಮತ್ತು ಭಾರತೀಯ ರಾಜಕೀಯ ಪರಿಸ್ಥಿತಿ’ ಎನ್ನುವ ವಿಷಯದ ಬಗ್ಗೆ ಮಾತನಾಡಿದರು.

ಪ್ರೊ.ಪಟ್ಟಾಭಿರಾಮ ಸೋಮಯಾಜಿ ಜಾಗತೀಕರಣದ ಬಗೆಗೆ ಅಡಿಗರ ನಿಲುವನ್ನು ಪ್ರತಿಪಾದಿಸಿದರು. ಅಡಿಗರು ಹಾಗೂ ಬಸವಣ್ಣ ಕನ್ನಡ ಸಾಂಸ್ಕೃತಿಕ ಸಾಂದರ್ಭದಲ್ಲಿ ಎರಡು ಮೇರು ಶಿಖರಗಳು ಎಂದು ಡಾ.ಚಂದ್ರಶೇಖರ ನಂಗಲಿ ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ಗಿರೀಶ್‌ ಕಾರ್ನಾಡ್‌ ನಿರ್ದೇಶಿಸಿರುವ ‘ಗೋಪಾಲಕೃಷ್ಣ ಅಡಿಗ’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಕವಿ ಕಾವ್ಯ ಸಂಭ್ರಮ: ಅಡಿಗಡಿಗೆ ಅಡಿಗ !

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+