‘ತಿರಂಗಯಾತ್ರೆ’ಯೇ ಬಿಜೆಪಿಯ ಕಡೆಯ ಯಾತ್ರೆ-ಧರ್ಮಸಿಂಗ್ ಉಗ್ರ
‘ತಿರಂಗಯಾತ್ರೆ’ಯೇ ಬಿಜೆಪಿಯ ಕಡೆಯ ಯಾತ್ರೆ-ಧರ್ಮಸಿಂಗ್ ಉಗ್ರ
ಯಾತ್ರೆಯನ್ನು ಸರ್ಕಾರ ನಿಷೇಧಿಸುವುದಿಲ್ಲ , ಜನರೇ ತಿರಸ್ಕರಿಸುತ್ತಾರೆ
ಕಳೆದ ಎರಡು ವಾರಗಳಿಂದ ಕಾಂಗ್ರೆಸ್ ಹಾಗೂ ರಾಜ್ಯ ಸರಕಾರದ ಮೇಲೆ ದಾಳಿ ಮಾಡುತ್ತಿದ್ದ ಬಿಜೆಪಿಯನ್ನು ಧರ್ಮಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತರಾಟೆಗೆ ತೆಗೆದು ಕೊಂಡರು.
ಜನರು ಇಂಥ ಯಾತ್ರೆಗಳಲ್ಲಿ ಭಾಗವಹಿಸಿ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ. ಕಳೆದ ಬಿಜೆಪಿಯ ರಥಯಾತ್ರೆಗಳ ಕಥೆ ಜನರಿಗೆ ತಿಳಿದಿದೆ. ಬಹುಶಃ ಬಿಜೆಪಿ ಪಾಲಿಗೆ ಇದೇ ಕಡೆಯ ಯಾತ್ರೆಯಾಗಲಿದೆ. ರಾಷ್ಟ್ರದಲ್ಲಿನ ಕಳಂಕಿತರು ಹಾಗೂ ಕ್ರಿಮಿನಲ್ ಮೊಕದ್ದಮೆ ಹೊತ್ತವರು ಅಧಿಕಾರವನ್ನು ಹೊಂದಬಾರದೆಂದು ಬಿಜೆಪಿ ಹೇಳುತ್ತಿದೆ. ಈ ಹಿಂದೆ ಕಳಂಕಿತರಾಗಿದ್ದ ಉಮಾ ಹೇಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರು? ಮಧ್ಯಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲ ಎಂದು ಘೋಷಿಸಿ, ಚುನಾವಣಾ ಆಯೋಗಕ್ಕೆ ವಂಚಿಸಿದ್ದಾರೆ. ಉಮಾಭಾರತಿಯವರ ಸದಸ್ಯತ್ವವೇ ರದ್ದಾಗುವ ಭೀತಿ ಬಿಜೆಪಿಯನ್ನು ಕಾಡುತ್ತಿದೆ. ಹೀಗಾಗಿಯೇ ಉಮಾಭಾರತಿ ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಾಟಕವಾಡಿದ್ದಾರೆ ಎಂದರು.
ಉಮಾ ಮೇಲೆ ಕೇಸು ದಾಖಲಿಸಿದ್ದು, ಧರ್ಮಸಿಂಗ್ ಅಲ್ಲ. ಸುಮ್ಮನೇ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. 1994 ರಲ್ಲಿ ಹುಬ್ಬಳ್ಳಿಯಲ್ಲಿ ಪೋಲಿಸರು ಉಮಾರನ್ನು ಬಂಧಿಸಿದ್ದು, ರಾಷ್ಟ್ರಧ್ವಜ ಹಾರಿಸಿದ್ದಕ್ಕಾಗಿ ಅಲ್ಲ. ಸಮಾಜದಲ್ಲಿ ಉಮಾಭಾರತಿ, ಶಾಂತಿ ಭಂಗ ಮಾಡಿದರೆಂದು ಕ್ರಿಮಿನಲ್ ಮೊಕದ್ದಮೆಗಳ ದಾಖಲಿಸಿದ್ದರು ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದರು.
ತಿರಂಗ ಯಾತ್ರೆಯಲ್ಲಿ ಅಹಿತಕರ ಘಟನೆಗಳಾಗದಂತೆ ಎಚ್ಚರವಹಿಸಲು, ಪೋಲಿಸ್ ವರಿಷ್ಠರ ಸಭೆಯಲ್ಲಿ ಸೂಚನೆಗಳ ನೀಡಲಾಗಿದೆ. ಉಮಾಭಾರತಿಗೆ ಝಡ್ ಪ್ಲಸ್ ರಕ್ಷಣೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications