Get Updates
Get notified of breaking news, exclusive insights, and must-see stories!

ಧನಂಜಯನಿಗೆ ಕ್ಷಮೆ ! ಒಂದು ಪ್ರತಿಕ್ರಿಯೆ

ಧನಂಜಯನಿಗೆ ಕ್ಷಮೆ ! ಒಂದು ಪ್ರತಿಕ್ರಿಯೆ
ರೇಣುಕಾ ಶ್ಯಾಮ್‌, ನವದೆಹಲಿ ಅವರ ಧನಂಜಯನೆಂಬ ಬಡ ಭಾಗ್ಯಹೀನನೂ... ಲೇಖನಕ್ಕೆ ಭರತ್‌ಶಾಸ್ತ್ರಿ ಅವರ ಉತ್ತರ

ಆದರಣೀಯ ರೇಣುಕಾಜೀ,

ವಂದನೆಗಳು. ನನ್ನ ಪರಿಚಯ ಮಾಡಿಕೊಳ್ಳುತ್ತೇನೆ. ನನ್ನ ಹೆಸರು ಡಾ. ಭರತ್‌ ಶಾಸ್ತ್ರಿ, ವೃತ್ತಿಯಿಂದ ವೈದ್ಯ ಹಾಗೂ ಪ್ರವೃತ್ತಿಯಿಂದ ತಲೆಹರಟೆ. ಪ್ರಸ್ತುತ ಬ್ರಿಟನ್ನಿನಲ್ಲಿ ಇದ್ದೇನೆ. ನಿಮ್ಮ ‘ಧನಂಜಯನೆಂಬ ಬಡ ಹತಭಾಗ್ಯನೂ..’ ಓದಿದೆ. ಆಘಾತಕಾರಿ ಎನ್ನಿಸಿದ್ದರಿಂದ ಬರೆಯುತ್ತಿದ್ದೇನೆ.

ಧನಂಜಯ ಚಟರ್ಜಿಯ ಗಲ್ಲು ಶಿಕ್ಷೆ ದೇಶಾದ್ಯಂತ ಚರ್ಚೆ, ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದ್ದು ಹೌದು. ಯಾರ ಸಹನೆಯನ್ನೂ ಕೆಣಕುವಷ್ಟು ವೇಗದಲ್ಲಿ ಇತ್ಯರ್ಥವಾಗುವ ನಮ್ಮ ನ್ಯಾಯ ಪ್ರಕ್ರಿಯೆಯ ಗತಿಯಿಂದ ಸಹಜವಾಗಿ ಈ ಪ್ರಕರಣ ಇಷ್ಟು ದಿನಗಳ ತನಕ ಎಳೆಯಲ್ಪಟ್ಟಿತು.

ಈ ಪ್ರಕರಣ ನಡೆದದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಹದಿನಾಲ್ಕು/ಹದಿನಾರರ ಪ್ರಾಯದ ಉತ್ಸಾಹದ ಬುಗ್ಗೆಯಾಗಿದ್ದ ಹೇತಲ್‌ ಪಾರಿಖ್‌ ಬದುಕಿದ್ದರೆ ಇಂದು 30 ವರ್ಷಗಳ ಹೆಣ್ಣಾಗಿರುತ್ತಿದ್ದಳು. ಸೂಕ್ತ ಅವಕಾಶ ದೊರೆತಿದ್ದರೆ ಬಹುಶಃ ನಿಮ್ಮಂತೆ ಕಂಪನಿಯಾಂದರ executive ಆಗಿರುತ್ತಿದ್ದಳು. ಇಲ್ಲವಾದರೆ ಶಾಲೆಯಾಂದರಲ್ಲಿ ಟೀಚರ್‌, ಅಥವಾ ನನ್ನಂತೆ ವೈದ್ಯಳೋ, ಇಲ್ಲದಿದ್ದರೆ ಮಕ್ಕಳ ತಾಯಾಗಿ ಇರುತ್ತಿದ್ದಳು.

ಈ ಎಲ್ಲ ಆಸೆ ಆಕಾಂಕ್ಷೆಗಳು ನಮ್ಮೆಲ್ಲರಿಗಿಂತ ಅವಳ ತಂದೆ ತಾಯಿಗೆ ಇರುತ್ತಿರಲಿಲ್ಲವೆ? ಇಂದು ಅವರದು ದುಃಖಿ ಕುಟುಂಬ. ಯಾವುದೇ ಸಮೂಹ ಮಾಧ್ಯಮಗಳೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಅವರು ಇಚ್ಛಿಸುತ್ತಿಲ್ಲ. ತಮ್ಮ ಪಾಡಿಗೆ ತಾವು ಇರಲು ಬಿಟ್ಟುಬಿಡಿ ಎಂದು ಕೋರುತ್ತಾರೆ. ಕೊಲ್ಕತಾದಿಂದ ಮುಂಬೈಗೆ ವಾಸ್ತವ್ಯವನ್ನು ಬದಲಿಸಿದ್ದಾರೆ. ಈ ಎಲ್ಲ ಬದಲಾವಣೆಯ ಜತೆಗೆ ಹೇತಲ್‌ ಇಲ್ಲದ ದುಃಖವೂ ಜತೆಗೂಡಿದೆಯೆಂದರೆ ಅದಕ್ಕೆ ಕಾರಣ ‘ಹತಭಾಗ್ಯ’ ಧನಂಜಯ ಚಟರ್ಜಿ !

ಇಷ್ಟಾದರೂ ಅವಳು ಮಾಡಿದ ಅಪರಾಧವಾದರೂ ಏನು? ತನ್ನನ್ನು ಕೆಣಕುತ್ತಿದ್ದ ಧನಂಜಯನಿಗೆ ‘ತನ್ನ ತಂದೆಗೆ ಹೇಳುವು’ದಾಗಿ ಧಮಕಿ ಹಾಕಿದ್ದು, ಮತ್ತು ಹೇಳಿದ್ದು. ಇದರ ನಂತರ ಅವಳಿಗೆ ತಕ್ಕ ಪಾಠ ಕಲಿಸುವುದಾಗಿ ಬಹಿರಂಗವಾಗಿ ಹೇಳಿದ ಧನಂಜಯ ಚಟರ್ಜಿ ಅವಳ ಮೇಲೆ ಅತ್ಯಾಚಾರ ಮಾಡಿ ಕೊಲೆಯೂ ಮಾಡಿದನೆಂದರೆ, ಇದು ಯಾವ ರೀತಿಯಲ್ಲಿ ಸಮಂಜಸ?

ಅವನಿಗಾಗಿ ಉಪವಾಸ ಮಾಡಿ ಪ್ರಾಣತ್ಯಾಗ ಮಾಡಲು ತಯಾರಿದ್ದ ಅವನ ತಂದೆ-ತಾಯಂದಿರು ಅಥವಾ ಪತ್ನಿಯ ಬಗ್ಗೆ ನಾನೇನೂ ಹೇಳಲು ಬಯಸುವುದಿಲ್ಲ. ಅವರಿಗೆ ಅವನು ಕೊಟ್ಟಿದ್ದಾದರೂ ಕೇವಲ ಕೆಟ್ಟ ಹೆಸರು. ಇಷ್ಟಕ್ಕೂ ಮದುವೆಯಾದ ಪತ್ನಿಗೆ ತನ್ನ ವೃತ್ತಿಯ ಬಗ್ಗೆ ತಾನು ಗಡಿ ಭದ್ರತಾ ಪಡೆಯಲ್ಲಿ ಕೆಲಸದಲ್ಲಿರುವುದಾಗಿ ಸುಳ್ಳು ಹೇಳಿ ನಂಬಿಸಿದ್ದ ಇದೇ ಚಟರ್ಜಿ! ಇದೆಲ್ಲವೂ ವರ್ತಮಾನ ಪತ್ರಿಕೆಗಳಿಂದಲೇ, ಸುದ್ದಿಮೂಲಗಳಿಂದಲೇ ನನಗೆ ತಿಳಿದಿರುವುದೇ ಹೊರತು ನಾನೇನೂ ಕಲ್ಪಿಸಿಕೊಂಡು ಹೇಳುತ್ತಿಲ್ಲ.

ಸೆಕ್ಯುರಿಟಿ ಗಾರ್ಡ್‌ ಆಗಿದ್ದು ಜನರ, ಅವರ ಮನೆಗಳ ರಕ್ಷಣೆ ಮಾಡಬೇಕಿದ್ದ ವ್ಯಕ್ತಿಯೇ ಜನರ ಶೀಲ, ಪ್ರಾಣ ಹರಣಕ್ಕೆ ಮುಂದಾದರೆ ಶಿಕ್ಷೆ ಇನ್ನೇನಿರಬೇಕು? ಸನ್ಮಾನ್ಯ ರಾಷ್ಟ್ರಪತಿಯವರೂ ಕೂಡಾ ಗೃಹ ಇಲಾಖೆಯಿಂದ ಇದಕ್ಕೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನೂ ವಿವರವಾಗಿ ಗಮನಿಸಿಯೇ ಅವನ ಕ್ಷಮಾಭಿಕ್ಷೆಯ ಅಪೀಲನ್ನು ತಿರಸ್ಕರಿಸಿದರು.

ಒಬ್ಬ ಹೆಣ್ಣಾಗಿಯೂ ಮತ್ತೊಬ್ಬ ಹೆಣ್ಣಿನ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನೂ ಕ್ಷಮಿಸಬಲ್ಲ ನಿಮ್ಮ ಔದಾರ್ಯಕ್ಕೆ ನನ್ನ ವಿಸ್ಮಯಪೂರ್ವಕ ನಮನಗಳು! ನಿಜಕ್ಕೂ ಹೆಣ್ಣೆಂದರೆ ‘ಕ್ಷಮಯಾ ಧರಿತ್ರೀ’!!

ನಿಮ್ಮ ಲೇಖನದಲ್ಲಿ ಕೆಲವು factual errors ಇದ್ದವೆಂದು ಹೇಳಲು ಇಚ್ಛಿಸುತ್ತೇನೆ. ಉದಾ.. ತಂದೂರಿ ಕೊಲೆಯ (ಕು)ಖ್ಯಾತ ಸುಶೀಲ್‌ ಶರ್ಮಾಗೆ ಮರಣದಂಡನೆ ವಿಧಿಸಲಾಗಿದೆ. ಅವನಿಗೆ ಸಹಾಯ ಮಾಡಿದರೆನ್ನಲಾದ ಒಬ್ಬನಿಗೆ ಜೀವಾವಧಿ ಶಿಕ್ಷೆಯೂ ಮತ್ತೊಬ್ಬನಿಗೆ ಹತ್ತು ವರ್ಷದ ಕಠಿಣ ಸಶ್ರಮ ಶಿಕ್ಷೆ ವಿಧಿಸಲಾಗಿದೆ ಎಂದು ಸುದ್ದಿ ಓದಿದ ನೆನಪು. ಶಿವಾನಿ ಭಟ್ನಾಗರ್‌ ಕೊಲೆಯ ಮುಖ್ಯ ಆಪಾದಿತನಾದ ಐಪಿಎಸ್‌ ಅಧಿಕಾರಿ ಆರ್‌ ಎಸ್‌ ಶರ್ಮಾಗೆ ದೆಹಲಿಯ ಹೈಕೋರ್ಟು ಜಾಮೀನು ನೀಡಲು ನಿರಾಕರಿಸಿತ್ತು ಎಂದೂ ಓದಿದ ನೆನಪು. ವಿವರಗಳು ನಿಮಗೆ ಸರ್ಕಾರಿ/ನ್ಯಾಯಾಂಗ ಪ್ರಕಟಣೆಗಳಲ್ಲಿ ಲಭ್ಯವಿರಬಹುದು.

ಮತ್ತೊಮ್ಮೆ ವಂದನೆಗಳೊಂದಿಗೆ,

ನಿಮ್ಮವ

- ಭರತ್‌ ಎನ್‌ ಎಸ್‌ ಶಾಸ್ತ್ರಿ ,
ಪೋರ್ಟ್‌ ಟಾಲ್ಬಟ್‌. ಯು.ಕೆ.

[email protected]

ಮುಖಪುಟ / ವಾಟ್ಸ್‌ ಹಾಟ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+