‘ನಾನು ಕೋರ್ಟು ಕಟಕಟೇಲಿ ನಿಲ್ಲಲು ಚಿತ್ರದುರ್ಗ ಶ್ರೀಗಳೇ ಕಾರಣ’
‘ನಾನು ಕೋರ್ಟು ಕಟಕಟೇಲಿ ನಿಲ್ಲಲು ಚಿತ್ರದುರ್ಗ ಶ್ರೀಗಳೇ ಕಾರಣ’
ಮುರುಘರಾಜೇಂದ್ರ ಶ್ರೀ, ಖಂಡ್ರೆ, ಲೀಲಾದೇವಿ ವಿರುದ್ಧ ಮಾತೆ ಮಹಾದೇವಿ ಕಿಡಿಕಿಡಿ
12ನೇ ಶತಮಾನದ ಮಹಾನ್ ಶರಣ ಅಣ್ಣ ಬಸವಣ್ಣನವರ ಕೂಡಲ ಸಂಗಮ ಎನ್ನುವ ಅಂಕಿತವನ್ನು ಲಿಂಗದೇವ ಎಂದು ಬದಲಿಸಿರುವ ಆರೋಪ ಎದುರಿಸುತ್ತಿರುವ ಮಾತೆ ಮಹಾದೇವಿ, ಜುಲೈ 9ರ ಶುಕ್ರವಾರ ಗುಲ್ಬರ್ಗಾದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾತೆ ಮಹಾದೇವಿ, ತಮ್ಮ ಇಂದಿನ ಸ್ಥಿತಿಗೆ ಕೆಲವು ಗಣ್ಯರ ಪಿತೂರಿಯೇ ಕಾರಣ ಎಂದು ದೂರಿದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಚಿತ್ರದುರ್ಗ ಬೃಹನ್ಮಠದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ಕುತಂತ್ರದಿಂದಾಗಿ ತಾವು ಆರೋಪ ಹೊರಬೇಕಾಯಿತು ಎಂದು ಮಾತೆ ಮಹಾದೇವಿ ನೇರವಾಗಿ ಟೀಕಿಸಿದರು.
ಬಸವಣ್ಣನವರ ವಚನಗಳ ಅಂಕಿತವನ್ನು ಲಿಂಗದೇವ ಎಂದು ಬದಲಿಸಿರುವ ತಮ್ಮ ಕ್ರಮವನ್ನು ಮಹಾದೇವಿ ಸಮರ್ಥಿಸಿಕೊಂಡರು. ಲಿಂಗದೇವ ಎನ್ನುವುದು ನನ್ನ ಸೃಷ್ಟಿಯಲ್ಲ . ಈ ಪದವನ್ನು ಬಸವಣ್ಣನವರೇ ಬಳಸಿದ್ದಾರೆ. ಶುದ್ಧೀಕರಿಸಿದ ವಚನಗಳಿಗೆ ಲಿಂಗದೇವ ಎನ್ನುವ ಅಂಕಿತ ಬಳಸಿದ್ದೇನೆ ಎಂದರು.
ವಚನಗಳನ್ನು ಶುದ್ಧೀಕರಿಸುವ ಪ್ರಕ್ರಿಯೆ ಹೊಸತೇನೂ ಅಲ್ಲ . 12ನೇ ಶತಮಾನದ ವಚನಗಳನ್ನು 15ನೇ ಶತಮಾನದಲ್ಲಿ ಶುದ್ಧೀಕರಿಸಲಾಗಿತ್ತು . 1996ರಲ್ಲಿ ನಾನು ಮತ್ತೊಮ್ಮೆ ಶುದ್ಧೀಕರಿಸಿದ್ದೇನೆ ಎಂದು ಮಹಾದೇವಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications