ರೈತರಿಗೆ ‘ಕೈಮರ’ : ಹಳ್ಳಿಗಳಲ್ಲಿ ಇಸ್ರೋದಿಂದ 100 ಉಪಗ್ರಹ ಕೇಂದ್ರ
ರೈತರಿಗೆ ‘ಕೈಮರ’ : ಹಳ್ಳಿಗಳಲ್ಲಿ ಇಸ್ರೋದಿಂದ 100 ಉಪಗ್ರಹ ಕೇಂದ್ರ
ಉಪಗ್ರಹ ಕೇಂದ್ರಗಳ ಮೂಲಕ ಹವಾಮಾನ, ಕೃಷಿ ಮಾಹಿತಿ ಪೂರೈಕೆ
ಉಪಗ್ರಹ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶಗಳ ಜನರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸುವ ದಿಶೆಯಲ್ಲಿ ಇಸ್ರೋ ಹೊಸ ಅಧ್ಯಾಯದ ರಚನೆಗೆ ಮುಂದಾಗಿದ್ದು - ಕರ್ನಾಟಕ, ತಮಿಳುನಾಡು, ಮತ್ತು ಕೆಲ ಉತ್ತರ ಪೂರ್ವ ರಾಜ್ಯಗಳ ಗ್ರಾಮೀಣಪ್ರದೇಶಗಳಲ್ಲಿ 100 ಉಪಗ್ರಹ ಮಾಹಿತಿ ಕೇಂದ್ರಗಳನ್ನು 2004 ರ ಅಂತ್ಯದೊಳಗೆ ಸ್ಥಾಪಿಸಲಿದೆ . ಇಸ್ರೋದ ಅಧ್ಯಕ್ಷ ಜಿ. ಮಾಧವನ್ ನಾಯರ್ ಈ ವಿಷಯವನ್ನು ಶುಕ್ರವಾರ ತಿಳಿಸಿದರು. ಬರಗಾಲ ನಿರ್ವಹಣೆ ಬಗೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಾಯರ್ ಮಾತನಾಡುತ್ತಿದ್ದರು.
ರೈತರಿಗೆ ವ್ಯವಸಾಯದಲ್ಲಿ ಸೂಕ್ತ ವೈಜ್ಞಾನಿಕ ತಂತ್ರಗಳ ಅಳವಡಿಕೆ, ಉತ್ಪಾದಿಸಲಾದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಹವಾಮಾನದ ವ್ಯತಿರಿಕ್ತತೆ ಮತ್ತು ಗ್ರಾಮೀಣ ಕಲಾಕಾರರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಇಸ್ರೋದ ಉದ್ದೇಶಿತ ಉಪಗ್ರಹ ಕೇಂದ್ರಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಮಾಧವನ್ ತಿಳಿಸಿದರು.
ಆಯಾ ಪ್ರದೇಶದ ಮಣ್ಣಿನ ತೇವಾಂಶಕ್ಕನುಗುಣವಾಗುವ, ಹೆಚ್ಚಿನ ಲಾಭ ತರುವ ಬೆಳೆಗಳ ಬಗ್ಗೆ ಮಾಹಿತಿ, ಟೆಲಿಮೆಡಿಸಿನ್( ಅಗತ್ಯ ಔಷಧಿಗಳ ಬಗ್ಗೆ ಅಂತರಜಾಲ ಮತ್ತು ತಂತ್ರಜ್ಞಾನಗಳ ಸಹಾಯದಿಂದ ಸೂಕ್ತ ತಿಳುವಳಿಕೆ ನೀಡುವುದು ) ವ್ಯವಸ್ಥೆಯನ್ನು ವಿಲೇಜ್ ರಿಸೋರ್ಸ್ ಸೆಂಟರ್ ಒದಗಿಸಲಿದೆ. ಇವೆಲ್ಲಕ್ಕೂ ಅಗತ್ಯವಿರುವ ಸಾಫ್ಟ್ವೇರ್ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇನ್ನು ಕೇವಲ ಮೂರು ತಿಂಗಳೊಳಗೆ ಅಗತ್ಯ ತಂತ್ರಜ್ಞಾನವನ್ನು ನಿರ್ಮಿಸಿ, ವರ್ಷಾಂತ್ಯದೊಳಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಮಾಧವನ್ ನಾಯರ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications