ಟಿಕೆಟ್ಗಾಗಿ ಪಕ್ಷದ ಕದ ಕಾದವರು ಹಾರಿಸುವ ಬಂಡಾಯದ ಬಾವುಟ!
ಟಿಕೆಟ್ಗಾಗಿ ಪಕ್ಷದ ಕದ ಕಾದವರು ಹಾರಿಸುವ ಬಂಡಾಯದ ಬಾವುಟ!
ಈ ವರ್ಷದ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ ಬಂಡಾಯ-ಬಾವುಟ !
- ದಟ್ಸ್ಕನ್ನಡ ಬ್ಯೂರೋ
ಈ ವರ್ಷ ಇಲ್ಲೆಲ್ಲಾ ಅತಿ ಹೆಚ್ಚಿನ ನೂಕುನುಗ್ಗಲು. ಇವೆಲ್ಲಾ ಪಕ್ಷದ ಒಂದು ಟಿಕೆಟ್ಗಾಗಿ. ಮೊದಲಿಗೆ ಪಕ್ಷಾಂತರ, ನಂತರ ಟಿಕೆಟ್,ಬಳಿಕ ಬಂಡಾಯ. ಇದು ಚುನಾವಣೆ ಘೋಷಣೆಯಾದ ಬಳಿಕ ಆರಂಭವಾಗುವ ಟಿಕೆಟ್ ಆಕಾಂಕ್ಷಿಗಳ ಪಯಣ.
ಅತಿ ಹೆಚ್ಚಿನ ಪಕ್ಷಾಂತರ ಚಟುವಟಿಕೆ ನಡೆದದ್ದು ಈ ವರ್ಷದ ಚುನಾವಣೆಯಲ್ಲಿ. ಯಾಕೆಂದರೆ ಇಷ್ಟು ವರ್ಷ ಕಾಂಗ್ರೆಸ್ ಪಕ್ಷ ಒಂದೇ ಬಲಿಷ್ಠವಾಗಿದ್ದರೆ, ಈ ವರ್ಷ ಬಿಜೆಪಿ ಅದರ ಸ್ಥಾನವನ್ನು ಆಕ್ರಮಿಸಲು ಹೊರಟಿದೆ. ಇದಲ್ಲದೆ ಪ್ರಾದೇಶಿಕ ಪಕ್ಷಗಳ ಮಹತ್ವ ಹೆಚ್ಚಾಗುತ್ತಿದೆ.
ಯಾವ ಕ್ಷೇತ್ರವೂ ರಾಜಕೀಯದ ಹೊರತಾಗಿ ಬಾಳಲಾರದು ಎಂಬುದು ಅಕ್ಷರಶಃ ನಿಜ . ಆದರೆ ಈ ವರ್ಷ ರಾಜಕೀಯಕ್ಕೆ ಲೋಕಸೇವಾ ಆಯೋಗ, ಪೊಲೀಸ್ ಇಲಾಖೆ, ಚಿತ್ರರಂಗ, ಮದ್ಯದ ಕುಳಗಳು, ವ್ಯಾಪಾರಸ್ಥರು, ಟ್ರಾವೆಲ್ಸ್ ಮಾಫಿಯಾದವರು ಎಲ್ಲಾ ಪ್ರವೇಶಿಸಿದರು. ಫಂಡ್ ನೀಡುವ ಮಂದಿ ಪಕ್ಷ ಸ್ಥಾಪಿಸಿದರು. ಫಂಡ್ ಸಂಗ್ರಹಿಸುವವರು ಟೆಕೆಟ್ ಕೇಳಿದರು.
ಇದರ ಫಲ?
ಪಕ್ಷದಲ್ಲಿ ಹಿಂದಿನಿಂದ ಇದ್ದ ಕಾರ್ಯಕರ್ತ, ಪಕ್ಷಾಂತರಿಯಾಗಿ ಬಂದ ಆಭ್ಯರ್ಥಿ ಮತ್ತು ಬೇರೆ ಕ್ಷೇತ್ರದಿಂದ ಹೊಸದಾಗಿ ಪ್ರವೇಶಿಸಿದ ನಾಯಕರ ಮಧ್ಯೆ ಪಕ್ಷದ ಟಿಕೆಟ್ಗಾಗಿ ಪೈಪೋಟಿ.ಆದರೆ ಒಂದು ಕ್ಷೇತ್ರದಿಂದ, ಒಂದು ಪಕ್ಷ ಒಬ್ಬನಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಟಿಕೆಟ್ಸಿಗದಿದ್ದಾಗ ಹಾರಿಸಿದ್ದೇ ಬಂಡಾಯದ ಬಾವುಟ.
ಈ ಸಲ ಬಂಡಾಯದ ಬಾವುಟ ಮೊದಲು ಹಾರಿದ್ದು ಬಂಗಾರಪ್ಪನ ವಿರುದ್ಧ. ಅವರ ಪುತ್ರ ಕುಮಾರನ ಬದಲು ಮಧುವಿಗೆ ಟಿಕೆಟ್ ದೊರೆತಾಗ ಶಿವಮೊಗ್ಗದ ಪಕ್ಷದ ಕಛೇರಿಯಲ್ಲಿ ಅವರಿಗೆ ಘೕರಾವ್ ಹಾಕಿದರು. ಬಂಗಾರಪ್ಪ ಕೊನೆಗೂ ಅತ್ತುಬಿಟ್ಟರು. ಇತ್ತ ಚಿಕ್ಕಮಗಳೂರಿನಿಂದ ಟಿಕೆಟ್ ದೊರಕದಿದ್ದ ತಾರಾದೇವಿ ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ. ಉಡುಪಿ, ಮುಧೋಳ, ಬಿರೂರು, ಹಾಸನ ಮುಂತಾದ ಕಡೆಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವ ಸಂಭವವಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಂಡಾಯದ ಕಹಳೆ ಈಗಾಗಲೇ ಮೊಳಗಿಯಾಗಿದೆ.
ಇದು ಆಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ ಪಾಡಾದರೆ, ಕಾಂಗ್ರೆಸ್ಮತ್ತು ಜೆಡಿಎಸ್ ಆಭ್ಯರ್ಥಿಗಳ ಸಂಪೂರ್ಣ ಪಟ್ಟಿ ಹೊರಬಂದಿಲ್ಲ. ಬಳಿಕ ಅಲ್ಲೂ ...?
ಇಬ್ಬರ ಜಗಳ ಮೂರನೆಯವನಿಗೆ ಲಾಭದ ಲೆಕ್ಕಾಚಾರ ಟಿಕೆಟ್ ಪಡೆದ ಅಭ್ಯರ್ಥಿಗಳಿಗಾದರೆ, ಆಭ್ಯರ್ಥಿಗಳ ಕೊರತೆಯಿರುವ ಕೆಲವು ಪಕ್ಷಗಳಿಗೀಗ ವಿಫುಲ ಅವಕಾಶ. ಕರ್ನಾಟಕದಲ್ಲಿ ಈ ವರ್ಷ ಉದ್ಯಮಿಗಳ ನೇತೃತ್ವದಲ್ಲಿ ಕೆಲವು ಪಕ್ಷಗಳು ಆರಂಭಗೊಂಡಿವೆ. ಟಿಕೆಟ್ ಎಲ್ಲಿಯೂ ಸಿಗದವರು ಇಲ್ಲಿ ಬರಬಹುದೆಂಬ ನಿರೀಕ್ಷೆ ಇವರಿಗೆ. ಇದು ಕದ ಕಾದವರಿಗೆ ಕೊನೆಯ ಪರೀಕ್ಷೆ. ಇಲ್ಲವೇ ರಾಜಕೀಯ ಸನ್ಯಾಸ! ಈ ಬಾರಿ!
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications