ಧಾರ್ಮಿಕತೆಯಲ್ಲಿ ಅಟಲ್ /ಅಡ್ವಾಣಿಗಿಂಥ ಕಮ್ಮಿಯೇನಲ್ಲ - ಕೃಷ್ಣ
ಧಾರ್ಮಿಕತೆಯಲ್ಲಿ ಅಟಲ್ /ಅಡ್ವಾಣಿಗಿಂಥ ಕಮ್ಮಿಯೇನಲ್ಲ - ಕೃಷ್ಣ
ಮುಖ್ಯಮಂತ್ರಿ ಕೃಷ್ಣರ ವಿಜಯದುಂದುಭಿ ಯಾತ್ರೆಯ ಮೊದಲ ಹಂತ ಮುಕ್ತಾಯ
ವಾಜಪೇಯಿ ಹಾಗೂ ಅಡ್ವಾಣಿ ರಾಜಕೀಯದಲ್ಲಿ ಧರ್ಮವನ್ನು ಬೆರೆಸುವ ಮೂಲಕ ದೇಶದ ಸಮ್ಮಿಶ್ರ ಸಂಸ್ಕೃತಿಗೆ ಅಪಚಾರವೆಸಗುತ್ತಿದ್ದಾರೆ. ಸಮಾಜದಲ್ಲಿ ಒಡಕುಂಟು ಮಾಡಲು ಯತ್ನಿಸುತ್ತಿದ್ದಾರೆ. ಹಾಗೆ ನೋಡಿದರೆ ನಾನು ಅವರಿಬ್ಬರಿಗಿಂತ ಹೆಚ್ಚಿನ ಧಾರ್ಮಿಕ ವ್ಯಕ್ತಿ . ನಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಅಥವಾ ಮುಜುಗರ ಪಡುವುದಿಲ್ಲ . ಆದರೆ, ನನ್ನ ಧಾರ್ಮಿಕ ನಂಬಿಕೆಗಳನ್ನು ಮನೆಯಾಳಗೇ ಇಟ್ಟುಕೊಂಡಿದ್ದೇನೆ ಎಂದು ಕೃಷ್ಣ ಹೇಳಿದರು. ವಿಜಯದುಂದುಭಿ ಯಾತ್ರೆಯ ಕೊನೆಯ ದಿನವಾದ ಶುಕ್ರವಾರ ಮುಖ್ಯಮಂತ್ರಿ ಕೃಷ್ಣ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಪ್ರಸ್ತಾಪಿಸಿರುವ ಒಂದು ಕುಟುಂಬಕ್ಕೆ ಎರಡು ಮಕ್ಕಳು ಮಾತ್ರ ಎನ್ನುವ ನೀತಿಯ ಕುರಿತು ಕಟಕಿಯಾಡಿದ ಕೃಷ್ಣ - ಅವರು ಮೊದಲು ಶೇ.33 ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲಿ. ಆನಂತರ ಕುಟುಂಬ ಯೋಜನೆಯ ಬಗ್ಗೆ ಯೋಚಿಸಲಿ ಎಂದರು.
ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ದೇಶದ ಮೇಲೆ ಅಕಾಲಿಕ ಚುನಾವಣೆಗಳನ್ನು ಹೇರಿದೆ. ತೆರಿಗೆದಾರರ ಹಣ ಉಳಿಸುವ ದೃಷ್ಟಿಯಿಂದ ರಾಜ್ಯದಲ್ಲಿಯೂ ಚುನಾವಣೆ ನಡೆಸಲು ನಿರ್ಧರಿಸಲಾಯಿತು ಎಂದು ಕೃಷ್ಣ ಹೇಳಿದರು.
ಮಲತಾಯಿ ಧೋರಣೆ
ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕೃಷ್ಣ ಆಪಾದಿಸಿದರು. ಆಂಧ್ರಪ್ರದೇಶಕ್ಕೆ 46 ಲಕ್ಷ ಟನ್ ಆಹಾರಧಾನ್ಯಗಳನ್ನು ನೀಡಿದರೆ, ರಾಜ್ಯಕ್ಕೆ ಕೇವಲ 15 ಲಕ್ಷ ಟನ್ ಆಹಾರ ಧಾನ್ಯಗಳನ್ನು ಪೂರೈಸಿದೆ. ತನ್ನ ಪಾಲುದಾರ ತೆಲುಗುದೇಶಂ ಪಕ್ಷವನ್ನು ಸಂತೃಪ್ತಿಗೊಳಿಸುವಲ್ಲಿ ಕೇಂದ್ರ ಸರ್ಕಾರ ತೊಡಗಿದೆ ಎಂದು ಕೃಷ್ಣ ಹೇಳಿದರು.
ರಾಜ್ಯದಲ್ಲಿನ ವಿರೋಧ ಪಕ್ಷಗಳ ಅಸ್ತಿತ್ವವನ್ನು ಪರೋಕ್ಷವಾಗಿ ಪ್ರಶ್ನಿಸಿದ ಕೃಷ್ಣ , ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ಟೀಕಿಸಿ ವಿರೋಧ ಪಕ್ಷಗಳು ಬಡವಾಗಿವೆ ಎಂದರು. ಜನತಾ ಪರಿವಾರದ ವಿಲೀನದ ಧಾರಾವಾಹಿಯನ್ನು ನೋಡುತ್ತಲೇ ಇದ್ದೇವೆ. ಜನರು ಎಷ್ಟು ದಿನ ತಾನೇ ಈ ಧಾರಾವಾಹಿ ನೋಡಿಯಾರು ಎಂದು ಕೃಷ್ಣ ನಕ್ಕರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications