ಭ್ರಷ್ಟರಿಗೆ ಕಾಂಗ್ರೆಸ್ಟಿಕೆಟ್ ನಕಾರ, ಜನಾರ್ಧನ ಪೂಜಾರಿ ಸ್ಪಷ್ಟನೆ
ಭ್ರಷ್ಟರಿಗೆ ಕಾಂಗ್ರೆಸ್ಟಿಕೆಟ್ ನಕಾರ, ಜನಾರ್ಧನ ಪೂಜಾರಿ ಸ್ಪಷ್ಟನೆ
ಬಹಿರಂಗ ಹೇಳಿಕೆ ನೀಡದಿರುವಂತೆ ವಿಶ್ವನಾಥ್-ಶಿವಕುಮಾರ್ಗೆ ಸೂಚನೆ
ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ. ಜನಾರ್ಧನ ಪೂಜಾರಿ ತಿಳಿಸಿದರು.
ಸೋಮವಾರ, ಮಾ. 8ರಂದು ನಡೆದ ಪಕ್ಷದ ಚುನಾವಣಾ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಯಾರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿರುವರೋ ಅಂಥವರಿಗೆ ಯಾವುದೇ ತರಹದ ಮನ್ನಣೆ ದೊರಕದು. ಬರುವ ಚುನಾವಣೆಯಲ್ಲಿ ಅಪ್ರಯೋಜಕರೆನಿಸಿದವರಿಗೆ ಟಿಕೆಟ್ ಕೊಡುವುದಿಲ್ಲ ಎಂದು ಪೂಜಾರಿ ಹೇಳಿದರು.
ಎಷ್ಟು ಜನ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಪೂಜಾರಿ ನಿರಾಕರಿಸಿದರು. ಸಹಕಾರಿ ಸಚಿವರಾದ ಎಚ್. ವಿಶ್ವನಾಥ್ ಮತ್ತು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ವಾಕ್ಸಮರದ ಕುರಿತು ಉತ್ತರಿಸಿದ ಪೂಜಾರಿ- ಬಹಿರಂಗ ಹೇಳಿಕೆ ನೀಡದಿರುವಂತೆ ಸಚಿವರಿಗೆ ಸೂಚಿಸಿದ್ದೇನೆ ಎಂದರು.
ಶಿವಕುಮಾರ್ ಮೇಲೆ ಬಿಜೆಪಿ ಸಂಚು
ಸಚಿವ ಡಿ.ಕೆ.ಶಿವಕುಮಾರ್ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ವಿಷಯದ ಕುರಿತು ಕೇಂದ್ರ ಸಚಿವ ಅರುಣ್ ಜೇಟ್ಲಿ ದುರುದ್ದೇಶ ಪೂರಿತ ಹೇಳಿಕೆ ನೀಡಿದ್ದಾರೆ. ರಾಜ್ಯದ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಅವರು ಶಿವಕುಮಾರ್ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಜನಾರ್ಧನ ಪೂಜಾರಿ ಹೇಳಿದ್ದಾರೆ.
ಒಂದು ವೇಳೆ ತೆರಿಗೆ ಬಾಕಿಯಿದ್ದರೆ ಅದು ತೆರಿಗೆ ಇಲಾಖೆ ಹಾಗೂ ಬಾಕಿದಾರನಿಗೆ ಸಂಬಂಧಿಸಿದ ವಿಚಾರ. ಇದನ್ನು ರಾಜಕೀಯ ವಿಷಯ ಮಾಡುವ ಅಗತ್ಯವಿಲ್ಲ . ತೆರಿಗೆ ಬಾಕಿಯಿದ್ದರೆ ಅನುಸರಿಸಬೇಕಾದ ಕಾನೂನು ಕ್ರಮಗಳು ಬೇರೆಯೇ ಇವೆ. ಇಂಥ ಸಾವಿರಾರು ಪ್ರಕರಣಗಳು ನಮ್ಮ ಮುಂದಿವೆ ಎಂದು ಪೂಜಾರಿ ಹೇಳಿದರು.
ಬಿಜೆಪಿ ಹಾಗೂ ಎನ್ಡಿಎ ಭ್ರಷ್ಟಾಚಾರಗಳನ್ನು ಸಾಕ್ಷಿ ಸಮೇತ ಜನತೆಯ ಮುಂದಿಡುವುದಾಗಿ ಜನಾರ್ಧನ ಪೂಜಾರಿ ಎಚ್ಚರಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications