ಚುನಾವಣಾ ನೀತಿ ಸಂಹಿತೆ ಪಾಲನೆಯಲ್ಲೂ ರಾಷ್ಟ್ರಪತಿ ಮೇಲ್ಪಂಕ್ತಿ
ಚುನಾವಣಾ ನೀತಿ ಸಂಹಿತೆ ಪಾಲನೆಯಲ್ಲೂ ರಾಷ್ಟ್ರಪತಿ ಮೇಲ್ಪಂಕ್ತಿ
ಆರು ವಾರಗಳ ಕಾಲದ ಸಾರ್ವಜನಿಕ ಹಾಗೂ ಸರ್ಕಾರಿ ಕಾರ್ಯಕ್ರಮ ರದ್ದು
ನೈತಿಕವಾಗಿ ದೇಶಕ್ಕೆ ಮಾದರಿಯಾಗಿರುವ ರಾಷ್ಟ್ರಪತಿ ಅಬ್ದುಲ್ ಕಲಾಮ್, ಚುನಾವಣಾ ನೀತಿ ಸಂಹಿತೆ ಪಾಲನೆಯಲ್ಲೂ ಮೇಲ್ಪಂಕ್ತಿ ಮೆರೆದಿದ್ದಾರೆ. ಆರು ವಾರಗಳ ಕಾಲದ ಸಾರ್ವಜನಿಕ ಮತ್ತು ಸರಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಮೂಲಕ ರಾಷ್ಟ್ರಪತಿ ಕಲಾಂ ದೇಶದ ಚುನಾವಣಾ ಪ್ರಕ್ರಿಯೆಗೆ ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿ ಇರುವುದರಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದು ರಾಷ್ಟ್ರಪತಿ ಕಲಾಮ್ರವರ ವೈಯುಕ್ತಿಕ ನಿರ್ಧಾರವಾಗಿದೆ. ಇವರು ಇಂತಹ ನಿರ್ಧಾರ ಕೈಗೊಂಡ ಮೊದಲ ರಾಷ್ಟ್ರಪತಿಯಾಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಮಾರಂಭಗಳಲ್ಲಿ ರಾಜಕಾರಣಿಗಳ ಜೊತೆ ವೇದಿಕೆ ಹಂಚಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ರಾಜಕಾರಣಿಗಳು ವೇದಿಕೆಯನ್ನು ಪ್ರಚಾರಕ್ಕೆ ದುರುಪಯೋಗ ಪಡಿಸಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರಪತಿ ಯಾವುದೇ ಪ್ರದೇಶದ ಸಮಾರಂಭಕ್ಕೆ ಭೇಟಿ ನೀಡಿದಾಗ ಮುಖ್ಯಮಂತ್ರಿ, ಸ್ಥಳೀಯ ಲೋಕಸಭಾ ಸದಸ್ಯ, ಶಾಸಕರು ಜೊತೆಗಿರುತ್ತಾರೆ. ಈ ವಸ್ತುಸ್ಥಿತಿ ಮುಂದೆ ಸಮಸ್ಯೆಗೆ ನಾಂದಿ ಹಾಡಬಾರದು ಎಂದು ಈ ನಿರ್ಣಯ. ಕಲಾಂ ಅವರ ನಿರ್ಧಾರದಿಂದಾಗಿ ಅವರು ಮುಂದಿನ ತಿಂಗಳು ಭಾಗವಹಿಸಬೇಕಾಗಿದ್ದ ಬೆಂಗಳೂರು, ಗುಂಟೂರು ಹಾಗೂ ರಾಜಸ್ಥಾನದಲ್ಲಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications