ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದಪ್ಪ ಅಲ್ಲಪ್ಪ ಸಾರೇಕೊಪ್ಪ ಬಂಗಾರಪ್ಪ !

By Staff
|
Google Oneindia Kannada News

ಹೌದಪ್ಪ ಅಲ್ಲಪ್ಪ ಸಾರೇಕೊಪ್ಪ ಬಂಗಾರಪ್ಪ !
ಬಂಗಾರಪ್ಪ ಕಾಂಗ್ರೆಸ್‌ನಿಂದ ಬಿಜೆಪಿಗೆ ಠಿಕಾಣಿ ಬದಲಿಸಿದ್ದಾರೆ. ಇದರಿಂದ ಬಂಗಾರಪ್ಪನವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಆದರೆ, ಕಾಂಗ್ರೆಸ್ಸಿಗರ ಕೋಪಕ್ಕೆ ನಿಜವಾದ ಕಾರಣ ಏನು ಗೊತ್ತೇ- ಬಂಗಾರಪ್ಪ , ಕಾಂಗ್ರೆಸ್ಸಿನ ಪೊಳ್ಳು ಜಾತ್ಯಾತೀತವಾದದ ಬುಡವನ್ನೇ ಅಲ್ಲಾಡಿಸಿದ್ದಾರೆ.

  • ಸಿ.ಎಂ. ರಾಮಚಂದ್ರ, ಹಿರಿಯ ಪತ್ರಕರ್ತರು
ಬಂಗಾರಪ್ಪ ಅವರನ್ನು ಎಲ್ಲರೂ ನಕಾರಾತ್ಮಕವಾಗಿ ಚಿತ್ರಿಸಿದ್ದೇ ಹೆಚ್ಚು. ಕಾಂಗ್ರೆಸ್ಸಿಗರಲ್ಲಿ ಬಹುತೇಕರು ‘ಜೀ ಹುಜೂರ್‌’ ಗಳು, ಅಂದರೆ ಯಾವುದೇ ಬೆಲೆ ತೆತ್ತದಾದರೂ ಹೈಕಮಾಂಡ್‌ ಹೇಳಿದ್ದನ್ನು ಅಂಧಾನುಕರಣೆ ಮಾಡುವ ‘ಹೌದಪ್ಪ’ ಗಳು.

ಆದರೆ, ಬಂಗಾರಪ್ಪ ಎದೆಗಾರಿಕೆಯುಳ್ಳ ಕಾಂಗ್ರೆಸ್ಸಿಗ. ಸ್ವಾಭಿಮಾನದ ಪ್ರಶ್ನೆ ಬಂದಾಗ ಎದುರಿಗಿರುವ ವ್ಯಕ್ತಿ ಎಷ್ಟೇ ದೊಡ್ಡವರಾಗಿರಲಿ, ಅಂಥವರಿಗೆ ಸೆಲ್ಯೂಟ್‌ ಹೊಡೆಯುವುದಿಲ್ಲ. ಈ ವಿಷಯದಲ್ಲಿ ಅವರನ್ನು ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಅವರಿಗೆ ಹೋಲಿಸಬಹುದು.

ಮುಖ್ಯಮಂತ್ರಿಗಳ ಹುದ್ದೆ ಅಥವಾ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷತೆಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಇಟ್ಟುಕೊಳ್ಳಿ ಎಂಬ ಇಂದಿರಾ ಗಾಂಧಿಯವರ ಆಜ್ಞೆಯನ್ನು ಅರಸು ಧಿಕ್ಕರಿಸಿದ್ದನ್ನು ಮರೆಯಲಾದೀತೇ ? ಮಾತ್ರವಲ್ಲ , ಈ ವಿಷಯಕ್ಕೆ ತಲೆ ಹಾಕದಂತೆ ಅರಸು ಸೂಚನೆಯನ್ನೂ ನೀಡಿದ್ದರು. ಕೊನೆಗೆ ಇಂದಿರಾ ಹಿಡಿತದಿಂದ ಹೊರ ಬಂದರು.

ಈ ವಿಷಯದಲ್ಲಿ ರಾಮಕೃಷ್ಣ ಹೆಗಡೆಯವರೂ ಭಿನ್ನವಾಗಿ ನಿಲ್ಲುತ್ತಾರೆ. ಅಂದು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್‌ ಮತ್ತು ಅಜಿತ್‌ ಸಿಂಗ್‌, ಮುಖ್ಯಮಂತ್ರಿಯಾಗಿದ್ದ ಹೆಗಡೆ ಪ್ರಾಬಲ್ಯ ಮುರಿಯುವ ಪ್ರಯತ್ನ ಮಾಡಿದರು. ಈ ಉದ್ದೇಶಕ್ಕಾಗಿ ದೇವೇಗೌಡರನ್ನು ಹೆಗಡೆ ವಿರುದ್ಧ ದಾಳವಾಗಿ ಬಳಸಿಕೊಂಡರು. ಇದಕ್ಕೆ ದಿಟ್ಟ ಉತ್ತರ ನೀಡಿದ ಹೆಗಡೆ ಬೇಕಿದ್ದರೆ ನಿಮ್ಮ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿಯನ್ನೇ ಆರಿಸಿಕೊಳ್ಳಿ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಇನ್ನೊಮ್ಮೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸಭೆ ಉದ್ದೇಶಿಸಿ ಮಾತನಾಡಲು ಮುಂದಾದ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೂ ಹೆಗಡೆ ಸರಿಯಾಗಿಯೇ ತಿವಿದಿದ್ದರು.

ಈ ವಿಷಯದಲ್ಲಿ ಬಂಗಾರಪ್ಪನವರೂ ಧೈರ್ಯವಂತರೇ. ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ವಿಷಯದಲ್ಲಿ ಕರ್ನಾಟಕದ ಹಿತಾಸಕ್ತಿಯಲ್ಲಿ ಹಸ್ತಕ್ಷೇಪ ಮಾಡದಂತೆ ಕೇಂದ್ರಕ್ಕೆ ಸೂಚಿಸಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರು! ಇನ್ನು ಮುಂದೆ ಚೆಲ್ಲಾಟವಾಡದಂತೆ ತಮಿಳುನಾಡನ್ನೂ ಆ ಆಧ್ಯಾದೇಶ ಪ್ರತಿಬಂಧಿಸಿತ್ತು.

ಕೊನೆಗೆ ರಾವ್‌ ಬೇರೆ ದಾರಿ ಕಾಣದೆ ಆಧ್ಯಾದೇಶದ ಕ್ರಮಬದ್ಧತೆ ಪರಿಶೀಲಿಸುವಂತೆ ಅದನ್ನು ರಾಷ್ಟ್ರಪತಿಗೆ ರವಾನಿಸಿದರು. ಕೊನೆಗೆ ಸುಪ್ರೀಂ ಕೋರ್ಟ್‌ ಆಧ್ಯಾದೇಶವನ್ನು ಸಂವಿಧಾನ ಬಾಹಿರ ಎಂದು ಘೋಷಿಸಿತೆಂದು ಪ್ರತ್ಯೇಕ ವಿಷಯ. ನಂತರ ನರಸಿಂಹರಾವ್‌, ರಾಜ್ಯದ ಕೆಲವು ಕಾಂಗ್ರೆಸ್‌ ಶಾಸಕರು, ಸಚಿವರು ಹೇಳಿದ ಕಾಗಕ್ಕ ಗುಬ್ಬಕ್ಕ ಕತೆ ಮುಂದಿಟ್ಟುಕೊಂಡು ಬಂಗಾರಪ್ಪನವರನ್ನು ಪದಚ್ಯುತಗೊಳಿಸಿದರು.

ಹಾಗೆ ನೋಡಿದರೆ ತಮಿಳುನಾಡಿಗೆ ನಿರ್ದಿಷ್ಟ ಪ್ರಮಾಣದ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಈಗಿನ ಮುಖ್ಯಮಂತ್ರಿ ಕೃಷ್ಣ ಅವರೂ ಪ್ರತಿಭಟಿಸಿದರು. ಆದರೆ ಈ ಪ್ರಕರಣ ಉಳಿದವರದಕ್ಕಿಂತ ಕೊಂಚ ಭಿನ್ನ. ಏಕೆಂದರೆ ಕೃಷ್ಣ ಉಲ್ಲಂಘಿಸಿದ್ದು ಈ ನೆಲದ ಅತ್ಯುಚ್ಚ ನ್ಯಾಯಾಲಯವನ್ನು. ಇದು ಸಂವಿಧಾನದ ಉಲ್ಲಂಘನೆ. ಪರಿಣಾಮ ನ್ಯಾಯಾಂಗ ನಿಂದನೆಗಾಗಿ ಸುಪ್ರೀಂ ಕೋರ್ಟ್‌ ಕೃಷ್ಣ ಅವರಿಗೆ ಛೀಮಾರಿ ಹಾಕಿತು. ಅಂದು ಬಂಗಾರಪ್ಪ ನಿಲುವನ್ನು ಪ್ರತಿಭಟಿಸಿದ ಕಾಂಗ್ರೆಸ್ಸಿಗರು, ಈ ಬಾರಿ ಕೃಷ್ಣ ವಿರುದ್ಧ ತುಟಿ ಪಿಟಕ್‌ ಎನ್ನದೇ ಇದ್ದುದು ವಿಚಿತ್ರವಾದರೂ ಸತ್ಯ.

ಸದ್ಯ ಬಿಜೆಪಿ ಸೇರಿಕೊಂಡಿರುವ ಬಂಗಾರಪ್ಪ ಅವರಿಗೆ ಹಲವು ಕಾರಣಗಳಿಗಾಗಿ ಕಾಂಗ್ರೆಸ್‌ ವಿರುದ್ಧ ಸೇಡು ತೀರಿಸಿಕೊಳ್ಳಬೇಕಾಗಿದೆ. ಈ ವಲಸೆಗೆ ಅವರ ಬಳಿ ಬಹಳಷ್ಟು ಸಮರ್ಥನೆಗಳಿವೆ. ನರಸಿಂಹರಾವ್‌ ಬಂಗಾರಪ್ಪನವರನ್ನು ಅವಧಿಗೆ ಮೊದಲೇ ಅಧಿಕಾರದಿಂದ ಕಿತ್ತೊಗೆಯಲಿಲ್ಲವೇ? ಬಂಗಾರಪ್ಪ ನೋವಿನಿಂದ ಅಧಿಕಾರ ತ್ಯಜಿಸಲಿಲ್ಲವೇ? ನಂತರ ಬಂದ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಬಂಗಾರಪ್ಪನವರನ್ನು ಮತ್ತಷ್ಟು ಅವಮಾನಿಸಲಿಲ್ಲವೇ? ಬಂಗಾರಪ್ಪ ವಿರುದ್ಧ ಕ್ಲಾಸಿಕ್‌ ಕಂಪ್ಯೂಟರ್‌ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಮೊಯ್ಲಿ ಅವರೇ ಅಲ್ಲವೇ?

ಬಂಗಾರಪ್ಪ ಅವರನ್ನು ವಲಸೆ ಚಟಕ್ಕಾಗಿ ಟೀಕಿಸಲಾಗಿದೆ. ಇಲ್ಲಿ ಅವರನ್ನು ಟೀಕಿಸುತ್ತಿರುವ ಪೈಕಿ ಎಷ್ಟು ಮಂದಿ ಪಕ್ಷಾಂತರ ಮಾಡಿಲ್ಲ ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಬೇಕಾಗುತ್ತದೆ. ಇಲ್ಲಿ ಕಾಂಗ್ರೆಸ್ಸಿಗರಿಗೆ ಕೋಪ ಬರಲು ಮುಖ್ಯ ಕಾರಣ ಅವರು ಪಕ್ಷದ ಪೊಳ್ಳು ಜಾತ್ಯಾತೀತವಾದದ ಬುಡವನ್ನೇ ಅಲ್ಲಾಡಿಸಿದ್ದಾರೆ. ಎಸ್‌.ಎಂ.ಕೃಷ್ಣ ಅವರು ಹಿಂದೊಮ್ಮೆ ಇಂದಿರಾ ಗಾಂಧಿಯವರಿಗೆ ಕೈಕೊಟ್ಟು ಅರಸು ಕಾಂಗ್ರೆಸ್‌ ಸೇರಿರಲಿಲ್ಲವೇ? ಕೃಷ್ಣ ಮಂತ್ರಿಮಂಡಲದ ಕೆಲವು ಸದಸ್ಯರೂ ಸೇರಿದಂತೆ ಕಾಂಗ್ರೆಸ್‌ನಲ್ಲಿ ಪಕ್ಷಾಂತರಿಗಳ ಉದ್ದನೆಯ ಪಟ್ಟಿಯೇ ಇದೆ. ಅದಕ್ಕೇ ಹೇಳುವುದು, ಗಾಜಿನ ಮನೆಯಲ್ಲಿರುವವರು ಇತರರ ಮೇಲೆ ಕಲ್ಲು ಹೊಡೆಯಬಾರದು!

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X