ಶಿಕಾರಿಪುರ ಧನದಾಹಿ ವೈದ್ಯರಿಂದಾಗಿ ಬಸ್ಟಾಂಡಲ್ಲಿ ನರಳಿದ ಗರ್ಭಿಣಿ
ಶಿಕಾರಿಪುರ ಧನದಾಹಿ ವೈದ್ಯರಿಂದಾಗಿ ಬಸ್ಟಾಂಡಲ್ಲಿ ನರಳಿದ ಗರ್ಭಿಣಿ
ಆಪದ್ಭಾಂದವನಾಗಿ ಬಂದ ಬೀಡಾ ಅಂಗಡಿ ವ್ಯಕ್ತಿ , ಪ್ರಸವ ಸುಖಾಂತ್ಯ
ಲೋಕಾಯುಕ್ತ ರ ಭೇಟಿಯ ಸಂದರ್ಭದಲ್ಲಿ , ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಣಕ್ಕಾಗಿ ಪೀಡಿಸುವ ಕುರಿತು ಅನೇಕ ಮಂದಿ ಅಳಲು ತೋಡಿಕೊಂಡಿದ್ದರು. ರೋಗಿಗಳಿಂದ ದುಡ್ಡು ಪಡೆಯದಂತೆ ಲೋಕಾಯುಕ್ತರು ನೀಡಿದ ಎಚ್ಚರಿಕೆ ಫಲ ನೀಡಿಲ್ಲ . ಗೀತಮ್ಮ ಎನ್ನುವ ಈ ಮಹಿಳೆ ವೈದ್ಯರ ಅಮಾನವೀಯತೆಗೆ ಸಾಕ್ಷಿಯಾಗಿದ್ದಾಳೆ.
ಶಿಕಾರಿಪುರಕ್ಕೆ 15 ಕಿಮೀ ದೂರದ ಅಂಬಿಗೊಳ್ಳದಿಂದ ಗೀತಮ್ಮ ಹಾಗೂ ಆಕೆಯ ಗಂಡ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಬಂದರು. ಗೀತಮ್ಮ ಹೆರಿಗೆ ಬೇನೆಯಿಂದ ನರಳುತ್ತಿದ್ದಳು. ಆದರೆ, ಆಕೆಗೆ ಚಿಕಿತ್ಸೆ ನೀಡಲು ವೈದ್ಯರು 500 ರುಪಾಯಿ ನೀಡುವಂತೆ ಒತ್ತಾಯಿಸಿದರು. ತಮ್ಮೊಂದಿಗೆ ಯಾವುದೇ ಹಣ ತಂದಿರದ ಗೀತಮ್ಮನ ಗಂಡ ಅಲವತ್ತುಕೊಂಡರೂ ಯಾವುದೇ ಉಪಯೋಗವಾಗಿಲ್ಲ . ಒಂದು ತಾಸಿನ ನಂತರ ವೈದ್ಯರು ಗೀತಮ್ಮನನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಆಟೋಗೆ ಹಣವಿಲ್ಲದ ಗೀತಮ್ಮ ಹಾಗೂ ಆಕೆಯ ಗಂಡ ಸರಕು ಸಾಗಣೆ ಗಾಡಿಯಲ್ಲಿ ಶಿಕಾರಿಪುರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಬಸ್ ನಿಲ್ದಾಣದಲ್ಲಿ ಗೀತಮ್ಮನ ಪ್ರಸವ ವೇದನೆ ತಾರಕಕ್ಕೇರಿದೆ. ಗೀತಮ್ಮನ ಕಿರುಚಾಟ ಕೇಳಿದ ಬೀಡಾ ಅಂಗಡಿಯ ಮಾಲೀಕ ಸುರೇಶ್ ಸಹಾಯಕ್ಕೆ ಧಾವಿಸಿದ್ದಾನೆ. ತನ್ನ ಮನೆಗೆ ದಂಪತಿಗಳನ್ನು ಕರೆದೊಯ್ದ ಸುರೇಶ್- ಹೆರಿಗೆಗಾಗಿ ದಾದಿಯಾಬ್ಬಳನ್ನು ಕರೆತಂದಿದ್ದಾನೆ.
ಅಂತೂ ಬೆಳಗಿನ ಜಾವ ಮೂರರ ವೇಳೆಗೆ ಗೀತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಈ ಘಟನೆ ನಡೆದದ್ದು ಫೆ.6ರ ಶುಕ್ರವಾರ.
ವೈದ್ಯರನ್ನು ದೇವರು ಅನ್ನುತ್ತಾರೆ ? ಆದರೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಏನನ್ನುವುದು ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications