ಕೂಲಿಗಾಗಿ ಕಾಳಿಲ್ಲ , ಬರ ಅಧ್ಯಯನಕ್ಕೆ ರಾಜ್ಯಕ್ಕೆ ಕೇಂದ್ರದ ತಂಡ
ಕೂಲಿಗಾಗಿ ಕಾಳಿಲ್ಲ , ಬರ ಅಧ್ಯಯನಕ್ಕೆ ರಾಜ್ಯಕ್ಕೆ ಕೇಂದ್ರದ ತಂಡ
ಜನವರಿ 5ರಿಂದ 7ರವರೆಗೆ ರಾಜ್ಯದ ಬರ ಪರಿಸ್ಥಿತಿ ಕುರಿತು ಕೇಂದ್ರ ತಂಡದ ಅಧ್ಯಯನ
ರಾಜ್ಯದಲ್ಲಿನ ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ, 2882 ಕೋಟಿ ರುಪಾಯಿ ಹಣಕಾಸಿನ ನೆರವು ಹಾಗೂ 11 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಆಗಮಿಸುತ್ತಿದೆ.
ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಗದಗ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕೇಂದ್ರದ ವೀಕ್ಷಕರು ಬರ ಪರಿಸ್ಥಿತಿಯ ಅಧ್ಯಯನ ನಡೆಸುವರು ಎಂದು ಕಂದಾಯ ಖಾತೆ ರಾಜ್ಯ ಸಚಿವ ಮಲ್ಲಿಕಾರ್ಜುನ ನಾಗಪ್ಪ ಗುರುವಾರ (ಜ.1) ಸುದ್ದಿಗಾರರಿಗೆ ತಿಳಿಸಿದರು.
ಜನವರಿ 4ರಂದು ರಾಜ್ಯಕ್ಕೆ ಆಗಮಿಸುವ ಕೇಂದ್ರದ ತಂಡ ತನ್ನ ಅಧ್ಯಯನವನ್ನು ಜನವರಿ 5ರಿಂದ ಪ್ರಾರಂಭಿಸುವುದು. ಸಣ್ಣ ಸಣ್ಣ ಗುಂಪುಗಳಲ್ಲಿ ಈ ತಂಡ ಪ್ರವಾಸ ಕೈಗೊಳ್ಳುವುದು. ಜನವರಿ 7ರಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ಅಧಿಕಾರಿಗಳೊಂದಿಗೆ ಕೇಂದ್ರದ ತಂಡ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲಿದೆ ಎಂದು ನಾಗಪ್ಪ ತಿಳಿಸಿದರು.
ಆಹಾರಧಾನ್ಯದ ಕೊರತೆಯಿಂದಾಗಿ ಕೂಲಿಗಾಗಿ ಕಾಳು ಯೋಜನೆ ಕಳೆದ ಹದಿನೈದು ದಿನಗಳಿಂದ ಸ್ಥಗಿತಗೊಂಡಿದೆ. ಆದರೆ, ತನ್ನ ಬಜೆಟ್ ಕಾರ್ಯಕ್ರಮಗಳಂತೆ ರಾಜ್ಯ ಸರ್ಕಾರ ಎಲ್ಲ ಬರ ಪರಿಹಾರ ಕಾಮಗಾರಿಗಳನ್ನೂ ಮುಂದುವರಿಸಿದೆ. ಕೇಂದ್ರ ಸರ್ಕಾರ ಈವರೆಗೆ 1.56 ಲಕ್ಷ ಟನ್ ಆಹಾರ ಧಾನ್ಯಗಳನ್ನು ಬರ ಪರಿಹಾರಕ್ಕಾಗಿ ನೀಡಿದ್ದು , ಈ ಧಾನ್ಯವನ್ನು ರಾಜ್ಯದ 25 ಜಿಲ್ಲೆಗಳಲ್ಲಿ ವಿತರಿಸಲಾಗಿದೆ ಎಂದು ಸಚಿವ ನಾಗಪ್ಪ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications